ಬೆಳಗಾವಿ: ಬಸವಣ್ಣನವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಅತ್ಯಂತ ಅಗತ್ಯವಾದ ದಾರಿದೀಪಗಳಾಗಿವೆ. ಅವರು ಕೇವಲ ಒಂದು ಧರ್ಮದ ಸ್ಥಾಪಕರಲ್ಲ, ಬದಲಾಗಿ ಒಂದು ಕ್ರಾಂತಿಕಾರಿ ಚಿಂತಕರು. ಸಮಾನತೆಗಾಗಿ 12 ನೇ ಶತಮಾನದಲ್ಲಿ ಹೋರಾಟ ಮಾಡಿ, ಜಗಕ್ಕೆ ಬೆಳಕಾದವರೂ ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.
ಮಹಾಂತೇಶ ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ. ಬಸವಣ್ಣನವರು 12ನೇ ಶತಮಾನದಲ್ಲೇ ಮೌಢ್ಯಗಳ ವಿರುದ್ಧ ಹೋರಾಡಿದ್ದರು. ನಾವು ಕೂಡ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಾತಿ-ಧರ್ಮದ ಭೇದ ಮರೆತು ‘ಮನುಷ್ಯ ಧರ್ಮ’ವನ್ನು ಎತ್ತಿ ಹಿಡಿಯುವುದೇ ನಿಜವಾದ ಬಸವ ಜಯಂತಿ ಆಚರಣೆಯ ಉದ್ದೇಶ. ಆದ್ದರಿಂದ ರಾಷ್ಟ್ರೀಯ ಬಸವ ದಳವು ಬಸವಣ್ಣನವರ ಕ್ರಾಂತಿಕಾರಿ ವಿಚಾರಗಳನ್ನು ಮತ್ತು ಶರಣ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿ, ಬಸವಣ್ಣನವರ ವಚನಗಳನ್ನು ಕೇವಲ ಕನ್ನಡಕ್ಕೆ ಸೀಮಿತಗೊಳಿಸದೆ, ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಯುವ ಪೀಳಿಗೆಗೆ ತಲುಪಿಸಬೇಕೆಂದು ಕರೆ ನೀಡಿದರು.
12 ನೇ ಶತಮಾನದಲ್ಲಿ ಶರಣರ ಕಲ್ಯಾಣ ಕ್ರಾಂತಿ ಆಯಿತು, ಆ ಹೋರಾಟದ ಹಾದಿಯನ್ನು ಯುವ ಪೀಳಿಗೆ ತಿಳಿದುಕೊಳ್ಳುವ ಅವಶ್ಯವಿದೆ. ಎಲ್ಲರಿಗೂ ನ್ಯಾಯ, ಸಮಾನ ಅವಕಾಶ ಸಿಗಬೇಕು ಎಂದು ಹೋರಾಟ ಮಾಡಿದ ಹಾಗೂ ಕಾಯಕದ ಮಹತ್ವ ಸಾರಿದ ಬಸವಣ್ಣನವರ ಒಂದೊಂದು ವಚನಗಳೂ ಬದುಕಿನ ಪಾಠ ಹೇಳುತ್ತವೆ. ಹಾಗಾಗಿ ಇವುಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟಲ್ಲಿ ಸದ್ಗುಣಗಳು ಮೈಗೂಡುತ್ತವೆ ಎಂದು ಹೇಳಿದರು.
ಪೋಷಕರು ಮಕ್ಕಳಿಗೆ ಬಸವಣ್ಣನವರ ವಚನಗಳನ್ನು ಕಲಿಸಿಸಬೇಕು. ‘ಬಸವಣ್ಣನವರು ನೀಡಿರುವ ಕಾಯಕ ತತ್ವ ಇಡೀ ಜಗತ್ತಿಗೆ ಆದರ್ಶ. ಪ್ರತಿಯೊಬ್ಬ ವ್ಯಕ್ತಿಯೂ ಕಾಯಕ ಮಾಡಬೇಕು. ಶರಣರ ಸಮಾಜದಲ್ಲಿ ಸೋಮಾರಿಗಳಿಗೆ ಸ್ಥಾನವೇ ಇರಲಿಲ್ಲ. ಸತ್ಯ, ಶುದ್ಧವಾದ ದುಡಿಮೆಯ ಶ್ರಮ ಸಂಸ್ಕೃತಿಯೇ ಶರಣರ ಆದರ್ಶವಾಗಿತ್ತು. ಸಮಾಜದ ಪ್ರತಿಯೊಬ್ಬ ವ್ಯಕ್ತಿವೂ ಕಾಯಕ ಕಡ್ಡಾಯವಾಗಿ ಮಾಡಿದಾಗ ಆ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ’ ಎಂದರು.
ಈ ಸಂದರ್ಭದಲ್ಲಿ ಶಾಸಕ ಆಸೀಪ್ (ರಾಜು) ಸೇಠ್, ಮುರುಗೇಂದ್ರ ಪಾಟೀಲ್ , ರಾಜುಗೌಡ ಪಾಟೀಲ್ , ಸುಮಂತ ಗೌಡ, ಬೆಳಗಾವಿಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ರತ್ನಫ್ರಬಾ ಬೆಲ್ಲದ, ಉಪಾಧ್ಯಕ್ಷರು, ಬಸವಬಳಗದ ಅಭಿಮಾನಿಗಳು, ಹಾಗೂ ಇತರರು ಇದ್ದರು.
Laxmi News 24×7