Breaking News

ಗಡ್ಕರಿ ಕಚೇರಿಗೆ ಬೆಳಗಾವಿಯಿಂದ ಮತ್ತೆ ಕೊಲೆ ಬೆದರಿಕೆ ಕರೆ

Spread the love

ಬೆಳಗಾವಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆಳಗಾವಿಯಿಂದಲೇ ಮಂಗಳವಾರ ಮತ್ತೆ ಬೆದರಿಕೆ ಕರೆ ಮಾಡಲಾಗಿದೆ.

ಆದರೆ, ಈ ಕರೆಯನ್ನು ಸದ್ಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ಜಯೇಶ್‌ ಪೂಜಾರಿ ಮಾಡಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

 

‘ನನಗೆ ₹10 ಕೋಟಿ ಹಣ ನೀಡಬೇಕು. ಇಲ್ಲದಿದ್ದರೆ ನಿತಿನ್‌ ಗಡ್ಕರಿ ಅವರನ್ನು ಕೊಲೆ ಮಾಡುತ್ತೇನೆ’ ಎಂದು ಹೇಳಿಕೊಂಡು ಬೆಳಗಾವಿಯಿಂದ ಜಯೇಶ್‌ ಪೂಜಾರಿ ಎಂಬ ವ್ಯಕ್ತಿ ಕರೆ ಮಾಡಿದ್ದಾಗಿ ನಾಗ್ಪುರ ಪೊಲೀಸರು ತಿಳಿಸಿದ್ದಾರೆ.

ಕೊಲೆ ಆರೋಪದಲ್ಲಿ ಹಿಂಡಲಗಾ ಜೈಲು ಸೇರಿರುವ ಜಯೇಶ್‌ ಪೂಜಾರಿ, ಜನವರಿ 14ರಂದು ನಿತಿನ್‌ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ. ₹ 100 ಕೋಟಿ ನೀಡದಿದ್ದರೆ ಸ್ಫೋಟಿಸಿ ಗಡ್ಕರಿ ಅವರನ್ನು ಕೊಲೆ ಮಾಡುವುದಾಗಿ ಹೇಳಿದ್ದ. ಕರೆಯ ಜಾಡು ಹಿಡಿದು ನಾಗ್ಪುರ ಪೊಲೀಸರು ಹಿಂಡಲಗಾ ಜೈಲಿಗೆ ಬಂದು ಪರಿಶೀಲನೆ ನಡೆಸಿದ್ದರು.

ಇದೇ ವಿಚಾರವಾಗಿ ಜೈಲಿನ ಏಳು ಸಿಬ್ಬಂದಿಗೆ ನೋಟಿಸ್‌ ನೀಡಲಾಗಿತ್ತು. ಮಂಗಳವಾರ ಮತ್ತೆ ಇದೇ ವ್ಯಕ್ತಿಯ ಹೆಸರಿನಿಂದ ಕರೆ ಮಾಡಲಾಗಿದೆ.

‘ಹಿಂಡಲಗಾ ಜೈಲಿನಲ್ಲಿ ತಪಾಸಣೆ ಮಾಡಲಾಗಿದೆ. ಯಾರ ಬಳಿಯೂ ಮೊಬೈಲ್‌ ಇಲ್ಲ. ಜಯೇಶ್‌ ಪೂಜಾರಿಯನ್ನು ಭೇಟಿಯಾಗಲು ಬಂದವರು ಅಥವಾ ಜಾಮೀನು ಮೇಲೆ ಬಿಡುಗಡೆ ಆದವರು ಹೊರಗಿನಿಂದ ಈ ರೀತಿ ಕರೆ ಮಾಡಿರಬಹುದು’ ಎಂದು ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ‌ ಪ್ರತಿಕ್ರಿಯಿಸಿದ್ದಾರೆ.

‘ನಾಗ್ಪುರದ ಕಚೇರಿಗೆ ಸಚಿವರ ಕೊಲೆ ಬೆದರಿಕೆ ಕರೆ ಹೋದ ಮಾಹಿತಿ ಸಿಕ್ಕಿದೆ. ಆದರೆ, ಅಲ್ಲಿನ ಪೊಲೀಸರು ಇದುವರೆಗೆ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿದರು.


Spread the love

About Laxminews 24x7

Check Also

ಕನಿಷ್ಠ ವೇತನಕ್ಕೆ ಒತ್ತಾಯಿಸಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮನವಿ

Spread the loveಬೆಳಗಾವಿ: ರಾಜ್ಯದ ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಠ ವೇತನ ಪ್ರಕಟಿಸಬೇಕಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ