ಬೆಳಗಾವಿ: ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ 18 ಚಿನ್ನದ ಪದಕ ಪಡೆದಿರುವ ಮುರಳಿ ಎಸ್. ಮುಂದೆ ತಮ್ಮ ಜೀವನದ ಏಕೈಕ ಗುರಿ ಬೋಧಕ ವೃತ್ತಿ ಮಾಡಬೇಕು ಎಂದುಕೊಂಡಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವದಲ್ಲಿ ಚಿನ್ನದ ಹುಡುಗನಾಗಿ ಹೊರಹೊಮ್ಮಿದ್ದಾರೆ.
ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಪಿಎಚ್. ಡಿಗಾಗಿ ಮುರಳಿ ತಯಾರಿ ನಡೆಸಿದ್ದಾರೆ. ನಂತರದಲ್ಲಿ ಬೋಧಕ ವೃತ್ತಿ ಮಾಡಬೇಕು ಎಂದುಕೊಂಡಿದ್ದಾರೆ.
ಇಷ್ಟೊಂದು ಚಿನ್ನದ ಪದಕ ಪಡೆದಿದ್ದು ಖುಷಿ ಆಗಿದೆ. ಕಷ್ಟಪಟ್ಟು ಶ್ರಮವಹಿಸಿ ಓದಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಮೊದಲಿನಿಂದಲೂ ನನ್ನ ಜೀವನದಲ್ಲಿ ಶಿಕ್ಷಕನಾಗಬೇಕೆಂಬ ಆಸೆ ಇತ್ತು. ಈಗ ಅದರಲ್ಲಿಯೇ ಮುಂದುವರಿಯಲಿದ್ದೇನೆ. ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ, ದೇಶದ ಪ್ರಗತಿಗೆ ಸಹಕರಿಸುತ್ತೇನೆ ಎನ್ನುತ್ತಾರೆ ಮುರಳಿ ಎಸ್.
ಯುಪಿಎಸ್ಸಿ ಆಸೆ: ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಾಜಿಯ ಎಲೆಕ್ಟ್ರಿಕಲ್ ಆಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಸುಶ್ಮಿತಾ ಎಸ್.ವಿ. 7 ಚಿನ್ನದ ಪದಕ ಪಡೆದಿದ್ದಾರೆ. ಮುಂದೆ ಯುಪಿಎಸ್ಸಿ ಮಾಡಿ ಸಮಾಜ ಸೇವೆ ಮಾಡಬೇಕೆಂಬ ಆಸೆ
ಇಟ್ಟುಕೊಂಡಿದ್ದಾರೆ. ತಂದೆ ಶ್ರೀನಿವಾಸ ತುಮಕೂರು ಮಹಾನಗರ ಪಾಲಿಕೆಯಲ್ಲಿ ಮುಖ್ಯ ಅ ಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪಿಯುಸಿಯಲ್ಲಿ ಸುಶ್ಮಿತಾ ಶೇ.92ರಷ್ಟು ಅಂಕ ಪಡೆದಿದ್ದರು.
ಬೆಂಗಳೂರಿನ ಯುವಿಕಾಗೆ 4 ಚಿನ್ನ
ಬೆಂಗಳೂರಿನ ಜಯನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿರುವ ಯುವಿಕಾ ರಮೇಶ ಬಾಬು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇನ್ಫಾರ್ಮೆಶನ್ ಸೈನ್ಸ್ ಆಯಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ 4 ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ತಂದೆ ರಮೇಶಬಾಬು ಡಿಎಕ್ಸ್ಸಿಯಲ್ಲಿ ಅಕೌಂಟಂಟ್ ಹಾಗೂ ತಾಯಿ ಗೃಹಿಣಿ ಆಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿಯೇ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಿರಂತರ ಓದುವ ಅಭ್ಯಾಸ ರೂಢಿಸಿಕೊಂಡಿದ್ದೆ. ವೇಳಾಪಟ್ಟಿ ಮೂಲಕ ಪಾಯಿಂಟ್ಸ್ಗಳನ್ನು ಬರೆದಿಟ್ಟುಕೊಂಡು ಓದುತ್ತಿದ್ದೆ. ಹೀಗಾಗಿ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ ಯುವಿಕಾ.
ದೊಡ್ಡೇರಿಯ ಸ್ವಾತಿಗೆ 7 ಬಂಗಾರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡೇರಿ ಗ್ರಾಮದ ಸ್ವಾತಿ ಎಸ್. ಬೆಂಗಳೂರಿನ ಎಸಿಎಸ್ ಕಾಲೇಜ ಆಫ್ ಎಂಜಿನಿಯರಿಂಗ್ನ ಎಲೆಕ್ಟ್ರಾನಿಕ್ಸ್ ಆಯಂಡ್ ಕಮ್ಯೂನಿಕೇಶನ್ ವಿಭಾಗದಲ್ಲಿ ಸ್ವಾತಿ ಎಸ್. 7 ಚಿನ್ನದ ಪದಕ ಪಡೆದಿದ್ದಾರೆ. ತಂದೆ ಶ್ರೀನಿವಾಸ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಸುಮಲತಾ ಗೃಹಿಣಿ ಆಗಿದ್ದಾರೆ.
ತಂಗಿ ಗೌತಮಿ ಬಿ.ಕಾಂ ಓದುತ್ತಿದ್ದಾರೆ. ಪರೀಕ್ಷೆಯ ಒಂದು ತಿಂಗಳು ಮುಂಚೆ ಹೆಚ್ಚೆಚ್ಚು ಓದುತ್ತಿದ್ದೆ. ಓದಿದ್ದನ್ನು ಮನವರಿಕೆ ಮಾಡಿಕೊಂಡು ನೆನಪಿಸಿಕೊಳ್ಳುತ್ತಿದ್ದೆ. ಸಮಯ ನಿರ್ವಹಣೆ ಮಾಡಿಕೊಂಡು ಓದುವ ಅಭ್ಯಾಸ ಇತ್ತು. ಮುಂದೆ ಎಂ.ಟೆಕ್ ಹಾಗೂ ಪಿಎಚ್.ಡಿ ಮಾಡಬೇಕು ಎಂಬ ಆಸೆ ಇದೆ. ಚಿನ್ನ ಸಿಕ್ಕಿದ್ದು ಖುಷಿ ತಂದಿದೆ ಎಂದು ಸ್ವಾತಿ ಸಂತಸ ಹಂಚಿಕೊಂಡರು.