ನನಗೆ ಇನ್ನು 75 ವರ್ಷ ಆಗಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಯಾಕೆಂದರೆ ಇಷ್ಟೇಲ್ಲಾ ಆಶೀರ್ವಾದ ಇದ್ದ ಮೇಲೆ ಈಗ ನನಗೆ 25 ವರ್ಷ ಶುರುವಾಗಿದೆ ಎಂದು ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಅವರು ಹರ್ಷ ವ್ಯಕ್ತಪಡಿಸಿದರು.
ಬೆಳಗಾವಿಯ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆವರಣದಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಮಠಾಧಿಪತಿಗಳು ವಿಷಯ ಮೇಲೆ ಮಠಾಧೀಶರ ಬೃಹತ್ ಚಿಂತನಾ ಸಮಾವೇಶ ಮತ್ತು ಡಾ.ಪ್ರಭಾಕರ್ ಕೋರೆಯವರ ಅಮೃತ ಮಹೋತ್ಸವದ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ಸಮಾವೇಶದಲ್ಲಿ ಮಾತನಾಡಿದ ಡಾ.ಪ್ರಭಾಕರ್ ಕೋರೆ ಅವರು ಕೆಎಲ್ಇ ಶಿಕ್ಷಣ ಸಂಸ್ಥೆ ಇಂದು ಬೆಳೆದಿದೆ. ಬಹಳ ಕಷ್ಟದಲ್ಲಿ ಈ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದರು. ಇದರ ಜೊತೆಗೆ ಇಲ್ಲಿಯೇ ನಾಗನೂರು ಮಠ ಶುರುವಾಯ್ತು. ನಮ್ಮ ತಂದೆಯವರು ಬಹಳ ಶ್ರೀಮಂತರಿದ್ದರು. ಆದರೂ ನನ್ನನ್ನು ನಾಗನೂರು ರುದ್ರಾಕ್ಷಿ ಮಠದ ವಸತಿ ನಿಲಯಕ್ಕೆ ನಮ್ಮ ತಂದೆಯವರು ಸೇರಿಸಿದ್ದರು. ನಾನು ಇಲ್ಲಿ ಕೇವಲ 4 ದಿನವೂ ಉಳಿಯಲಿಲ್ಲ.
ಯಾಕೆಂದರೆ ನಮ್ಮ ತಾಟನ್ನು ನಾವೇ ತೊಳಿಯಬೇಕಿತ್ತು. ನಾನು ದೊಡ್ಡ ಶ್ರೀಮಂತನ ಮಗ, ಹೀಗಾಗಿ ಅಲ್ಲಿಂದ ಹೊರಗೆ ಬಂದೆ. ಬಳಿಕ ನನ್ನನ್ನು ಬೇರೆ ಕಡೆ ನಮ್ಮ ತಂದೆ ಸೇರಿಸಿದ್ದರು. ಆ ಕಾಲದಲ್ಲಿ ಶ್ರೀಮಂತರು ಇರಲಿ ಯಾರೇ ಇರಲಿ ಮಠದಲ್ಲಿಯೇ ಇದ್ದುಕೊಂಡು ಶಿಕ್ಷಣ ಪಡೆದುಕೊಳ್ಳಬೇಕಿತ್ತು. ಅಂತಹ ಕಾರ್ಯವನ್ನು ನಾಗನೂರು ಶ್ರೀಗಳು ಮಾಡಿದ್ದರು. ಹೀಗಾಗಿ ನಾಗನೂರು ರುದ್ರಾಕ್ಷಿ ಮಠವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿಕೊಂಡರು.