ಹುಬ್ಬಳ್ಳಿ: ‘ಬಲಗೈ ಸಮುದಾಯದವರಿಗೆ ಪಕ್ಷದಲ್ಲಿ ಕಡಿಮೆ ಅವಕಾಶ ನೀಡಲಾಗಿದೆ. ಪಕ್ಷಕ್ಕೆ ಈ ಸಮುದಾಯದ ಬಗ್ಗೆ ತಪ್ಪು ಕಲ್ಪನೆ ಮೂಡಿಸಲಾಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು’ ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ನಡೆದ ದಮನಿತರ ಚಿಂತನ ಸಭೆಯಲ್ಲಿ ಮಾತನಾಡಿ, ‘ಪಕ್ಷದಲ್ಲಷ್ಟೇ ಅಲ್ಲದೆ, ಸರ್ಕಾರ ಮತ್ತು ಅಧಿಕಾರಶಾಹಿ ವರ್ಗದಲ್ಲೂ ಆಯಕಟ್ಟಿನ ಹುದ್ದೆಗಳನ್ನು ನೀಡಬೇಕು’ ಎಂದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತನಾಡಿ, ‘ಹಿಂದೂ ಧರ್ಮದಲ್ಲಿರುವ ಜಾತಿ ಪದ್ಧತಿ ಹಾಗೂ
ಸಾಮಾಜಿಕ ತಾರತಮ್ಯವನ್ನು ಹಂತಹಂತವಾಗಿ ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅಂಬೇಡ್ಕರ್ ಜನ್ಮಸ್ಥಳ, ಲಂಡನ್ನಲ್ಲಿ ತಂಗಿದ್ದ ಮನೆ ಸೇರಿದಂತೆ ಅವರು ಒಡನಾಡಿದ ಪ್ರಮುಖ ಐದು ಸ್ಥಳಗಳನ್ನು ಬಿಜೆಪಿ ಅಭಿವೃದ್ಧಿಪಡಿಸಿದೆ. ಇದು ಅಂಬೇಡ್ಕರ್ ಬಗ್ಗೆ ನಮಗೆ ಇರುವ ಬದ್ಧತೆ ತೋರಿಸುತ್ತದೆ’ ಎಂದರು.
ಛಲವಾದಿ ಸಮುದಾಯದವರು ಸಲ್ಲಿಸಿದ ವಿವಿಧ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿದ ಸಚಿವ ಜೋಶಿ, ‘ಮನವಿ ಪರಿಶೀಲಿಸಿ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.
ಸಂಸದ ಮುನಿಸ್ವಾಮಿ, ಶಾಸಕ ನೆಹರೂ ಓಲೇಕಾರ, ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರ ಕಾರ್ಯವಾಹಕ ನಾ. ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ನಂಜುಂಡಸ್ವಾಮಿ, ವೈ. ಸಂಪಂಗಿ ಹಾಗೂ ಸಭೆಯ ಸಂಚಾಲಕ ಮತ್ತು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಮಹೇಂದ್ರ ಕೌತಾಳ ಇದ್ದರು. ರಾಜ್ಯದ ವಿವಿಧ ಭಾಗಗಳ ಎಸ್ಸಿ ಸಮುದಾಯದವರು ಪಾಲ್ಗೊಂಡಿದ್ದರು.