ಬೆಂಗಳೂರು : ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (ಕೆಜಿಐಡಿ) ಸೇವೆಗಳು 22 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಂಪೂರ್ಣ ಕಂಪ್ಯೂಟರೀಕರಣಗೊಂಡಿದೆ.
ಕೆಜಿಐಡಿ ಸೇವೆಗಳನ್ನು ಕಂಪ್ಯೂಟರೀಕರಣ ಮಾಡುವ ಯೋಜನೆಯನ್ನು ಬೆಂಗಳೂರು ನಗರ, ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ಮಂಡ್ಯ, ಮೈಸೂರು, ಕೊಡಗು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿತ್ತು. ಸೋಮವಾರದಿಂದ 22 ಜಿಲ್ಲೆಗಳಲ್ಲಿ ಜಾರಿಗೊಳಿಸಿದ್ದು, ನಂತರ ಎಲ್ಲ ಜಿಲ್ಲೆಗಳಲ್ಲೂ ಅನುಷ್ಠಾನಕ್ಕೆ ತರಲಾಗುವುದು ಎಂದು ಕೆಜಿಐಡಿ ನಿರ್ದೇಶಕರು ತಿಳಿಸಿದ್ದಾರೆ.
‘ಇನ್ನು ಮುಂದೆ ಕೆಜಿಐಡಿ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಹಾಗೂ ಅವಧಿ ಮುಗಿದ ಪ್ರಕರಣಗಳ ಇತ್ಯರ್ಥಕ್ಕೆ ಭೌತಿಕ ಕಡತಗಳನ್ನು ನಿರ್ವಹಿಸುವಂತಿಲ್ಲ. ಆನ್ಲೈನ್ನಲ್ಲಿ ತಂತ್ರಾಂಶದ ಮೂಲಕವೇ ಪ್ರಕ್ರಿಯೆ ನಡೆಸಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ಭೌತಿಕವಾಗಿ ಕಡತ ನಿರ್ವಹಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು’ ಎಂದು ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
‘ಹೆಚ್ಚುವರಿ ಹಣ ಪಾವತಿಯಾದರೆ ಸಂಬಂಧಿಸಿದ ಅಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ. ಉಪ ನಿರ್ದೇಶಕರು ಮತ್ತು ನಿರ್ದೇಶಕರಿಂದ ಅನುಮೋದನೆ ಪಡೆಯಬೇಕಾದ ಪ್ರಕರಣಗಳಲ್ಲೂ ಭೌತಿಕ ಕಡತ ಸಲ್ಲಿಸುವ ಅಗತ್ಯವಿಲ್ಲ. ಆನ್ಲೈನ್ ಮೂಲಕವೇ ಅನುಮೋದನೆ ಕೋರಬೇಕು’ ಎಂದು ಸೂಚಿಸಿದ್ದಾರೆ.