Breaking News

ರಾಜ್ಯದ 9 ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ

Spread the love

ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಸಿದ್ಧತೆ ಮಾಡಿಕೊಂಡಿದ್ದ ಲೋಕಾಯುಕ್ತ ಪೊಲೀಸರು ರಾಜ್ಯದ 9 ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್‌ಗಳ ಮೇಲೆ ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಶಾಕ್‌ ಕೊಟ್ಟಿದ್ದಾರೆ.

 

ರಾಜ್ಯದ 9 ಚೆಕ್‌ಪೋಸ್ಟ್‌ಗಳ ಮೇಲೆ ಶುಕ್ರವಾರ ಮುಂಜಾನೆ 4.30ಕ್ಕೆ ಏಕಕಾಲದಲ್ಲಿ ನೂರಾರು ಲೋಕಾಯಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ಪೈಕಿ 7 ಚೆಕ್‌ಪೋಸ್ಟ್‌ಗಳಲ್ಲಿ ಅಕ್ರಮವಾಗಿ ಸಾರಿಗೆ ಇಲಾಖೆ ಸಿಬ್ಬಂದಿ ಸಂಗ್ರಹಿಸಿಟ್ಟಿದ್ದ ಕಂತೆ-ಕಂತೆ ನೋಟುಗಳನ್ನು ಕಂಡು ಲೋಕಾ ಪೊಲೀಸರೇ ದಂಗಾಗಿದ್ದಾರೆ. ಇನ್ನು 2 ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಲೋಪ ಎಸಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ಮಹಿಳಾ ನಿರೀಕ್ಷಕಿಯೊಬ್ಬರು ಲೋಕಾ ಪೊಲೀಸರನ್ನು ಕಂಡ ಕೂಡಲೇ 14 ಸಾವಿರ ರೂ. ನಗದನ್ನು ಕಿಟಕಿಯಲ್ಲಿ ಎಸೆದ ಪ್ರಸಂಗವೂ ನಡೆದಿದೆ.

ಎಲ್ಲೆಲ್ಲಿ ದಾಳಿ, ಎಷ್ಟೆಷ್ಟು ಪತ್ತೆ ?: ಬೆಂಗಳೂರು ಗ್ರಾಮಾಂತರ ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 63,227 ರೂ.ಅನ್ನು ಜಪ್ತಿ ಮಾಡಲಾಗಿದೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಇಲ್ಲಿನ ಹಿರಿಯ ಮೋಟಾರು ವಾಹನ ನಿರೀಕ್ಷಕಿ ಲಕ್ಷ್ಮೀ ಕಿಟಕಿಯಲ್ಲಿ 14 ಸಾವಿರ ರೂ. ಅನ್ನು ಕಿಟಕಿಯಲ್ಲಿ ಎಸೆದಿದ್ದಾರೆ.

ಈ ದೃಶ್ಯವನ್ನು ಲೋಕಾ ಪೊಲೀಸರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇಲ್ಲಿನ ಆರ್‌ಟಿಒ ಕಚೇರಿ ಮೇಲೆಯೂ 20 ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ತಪಾಸಣೆ ನಡೆಸಿದೆ.

ದಾಖಲೆಗಳ ಜತೆಗೆ ಅಲ್ಲಿದ್ದ ಖಾಸಗಿ ವ್ಯಕ್ತಿಗಳನ್ನೂ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಲೆಕ್ಕಪತ್ರಗಳಲ್ಲಿ ನಮೂದಾದ ಹಣಕ್ಕಿಂತ ಮೂರು ಪಟ್ಟು ನಗದು ಪತ್ತೆಯಾಗಿದ್ದು, ಬೆಳಗ್ಗೆ ಕೆಲ ತಾಸಿನಲ್ಲೇ ಡೀಲ್‌ ಕುದುರಿಸಿರುವುದು ಪತ್ತೆಯಾಗಿದೆ.

3 ತಿಂಗಳ ಹಿಂದೆ ಸ್ವಯಂ ಪ್ರೇರಿತ ದೂರು: ಜೂ.24ರಂದು ಲೋಕಾಯುಕ್ತ ನ್ಯಾ.ಜಿ.ಎಸ್‌.ಪಾಟೀಲ್‌ ವಿಜಯಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಚೆಕ್‌ ಪೋಸ್ಟ್‌ಗಳಲ್ಲಿ ನಡೆಯುತ್ತಿರುವ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಮೌಖೀಕವಾಗಿ ದೂರು ನೀಡಿದ್ದರು. ಈ ಆರೋಪದ ಮೇಲೆ ಜೂ.30ರಂದು ಲೋಕಾಯುಕ್ತದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿತ್ತು.

ಆರೋಪಗಳೇನು ?: ಚೆಕ್‌ಪೋಸ್ಟ್‌ಗಳಲ್ಲಿ ತೆರಳುವ ಗೂಡ್ಸ್‌ ಲಾರಿಗಳು ಹಾಗೂ ಇತರ ವಾಹನಗಳನ್ನೇ ಟಾರ್ಗೆಟ್‌ ಮಾಡುವ ಅಲ್ಲಿನ ಸಿಬ್ಬಂದಿ ಲಂಚ ಕೊಡದಿದ್ದರೆ ಮುಂದೆ ಸಾಗಲು ಬಿಡುತ್ತಿರಲಿಲ್ಲ. ಯಾವುದೋ ನೆಪವೊಡ್ಡಿ ಲಾರಿಗಳನ್ನು ಸೀಜ್‌ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.


Spread the love

About Laxminews 24x7

Check Also

ಯಾವುದೇ ದೂರದೃಷ್ಟಿ ಇಲ್ಲದ ನೀರಸ ಆಯವ್ಯಯ ಪತ್ರ ಇದು- ಬಿವೈವಿ

Spread the love ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ಮೂಲಕ ರಾಜ್ಯದ ಜನತೆಗೆ ನಿರಾಶೆ ಉಂಟು ಮಾಡಿದ್ದಾರೆ. ಯಾವುದೇ ದೂರದೃಷ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ