ಕಲಬುರಗಿ: ಇಲ್ಲಿನ ನೂತನ ವಿದ್ಯಾಲಯ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಪ್ರಯುಕ್ತ ಕೆಕೆಆರ್ಡಿಬಿ ಮತ್ತು ಜಿಲ್ಲಾಡಳಿತದಿಂದ ಶನಿವಾರ ನಡೆ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಬಂದ ಸಾವಿರಾರು ಜನರು ತಿಂಡಿ, ಊಟ ಸಿಗದೆ ಪರದಾಡಿದರು.
ನಗರ ಸೇರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಸುಮಾರು 40 ಸಾವಿರ ಜನರು ಬಂದಿದ್ದರು.
ಉಚಿತ ಬಸ್ ವ್ಯವಸ್ಥೆಯಿದ್ದ ಕಾರಣ ವಿದ್ಯಾರ್ಥಿಗಳು ಸೇರಿ ಬಿಜೆಪಿ ಕಾರ್ಯಕರ್ತರು, ವೃದ್ಧರು ಮಹಿಳೆಯರು ತಮ್ಮ ಮಕ್ಕಳೊಂದಿಗೆ ಬಂದಿದ್ದರು. ಕಾರ್ಯಕ್ರಮದಲ್ಲಿನ ಊಟದ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
‘ಬೆಳಿಗ್ಗೆ 7 ಗಂಟೆಗೆ ಏನೂ ತಿನ್ನದೆ ಚಿಂಚೋಳಿ ತಾಲ್ಲೂಕಿನ ಪೋಲಕಪ್ಪಳಿಯಿಂದ ಬಸ್ನಲ್ಲಿ 50 ಜನರು ಬಂದಿದ್ದೇವೆ. ಬೆಳಿಗ್ಗೆ ತಿಂಡಿ ಕೊಟ್ಟಿಲ್ಲ. ಊಟಕ್ಕಾಗಿ ಎರಡು ಗಂಟೆ ಸರತಿ ಸಾಲಿನಲ್ಲಿ ನಿಂತರೂ ಅನ್ನ ಸಿಗುತ್ತಿಲ್ಲ. ಮಕ್ಕಳು, ವೃದ್ಧರಿಗೆ ಹಸಿವು ತಡೆಯಲು ಆಗುತ್ತಿಲ್ಲ. ಕರೆತಂದವರು ಇತ್ತ ಸುಳಿಯುತ್ತಿಲ್ಲ’ ಎಂದು ಮಹಿಳೆಯೊಬ್ಬರು ತಿಳಿಸಿದರು.’ಆಯೋಜಕರು 20 ಸಾವಿರ ಜನರಿಗೆ ಆಗುವಷ್ಟು ತಿಂಡಿ, ಊಟ ಸಿದ್ಧಪಡಿಸುವಂತೆ ಆರ್ಡರ್ ಕೊಟ್ಟಿದ್ದರು. ಅವರು ಹೇಳಿದಷ್ಟು ಅಡುಗೆ ಮಾಡಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಊಟದ ಸಮಸ್ಯೆ ಆಗಿದೆ’ ಎಂದು ಅಡುಗೆ ತಯಾರಕರು ಹೇಳಿದರು.