Breaking News

ಸ್ಮಶಾನ ಇಲ್ಲದ್ದಕ್ಕೆ ಗ್ರಾಮ ಪಂಚಾಯತ್ ಚಾವಡಿ ಮೇಲೇ ಸಂಸ್ಕಾರಕ್ಕೆ ಸಿದ್ಧತೆ; ಕೊನೇಲಿ ಆಗಿದ್ದೇ ಬೇರೆ..

Spread the love

ಬಾಗಲಕೋಟೆ: ಸ್ಮಶಾನ ಇಲ್ಲದೆ ಸರ್ಕಾರಿ ಜಾಗದಲ್ಲಿ ಸಂಸ್ಕಾರಕ್ಕೆ ಮುಂದಾದಂತಹ ಪ್ರಕರಣಗಳು ಬಹಳಷ್ಟಿದ್ದು, ಇಂದು ಅಂಥದ್ದೇ ಮತ್ತೊಂದು ಪ್ರಕರಣ ಕಂಡುಬಂದಿದೆ. ಸ್ಮಶಾನ ಇಲ್ಲದ ಕಾರಣಕ್ಕೆ ಗ್ರಾಮ ಪಂಚಾಯತ್ ಚಾವಡಿ ಮೇಲೇ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡ ಘಟನೆಯೊಂದು ನಡೆದಿದೆ.

 

ಬಾಗಲಕೋಟೆ ಜಿಲ್ಲೆಯ ಕೆರಕಲಕಟ್ಟಿ ಗ್ರಾಮ ಪಂಚಾಯತ್ ಚಾವಡಿ ಮೇಲೆ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡು ಒಂದಷ್ಟು ಕಾಲ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ನಿನ್ನೆ ರಾತ್ರಿ ಸಾವಿಗೀಡಾಗಿದ್ದ ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ‌ ಕೆರಕಲಮಟ್ಟಿಯ ಕಾಳಪ್ಪ ಕಂಬಾರ (49) ಎಂಬವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತಂದು ಪಂಚಾಯಿತಿ ಚಾವಡಿ ಮೇಲಿಟ್ಟ ಗ್ರಾಮಸ್ಥರು ಶವಸಂಸ್ಕಾರಕ್ಕೆ ಮುಂದಾಗಿದ್ದರು. ಕಾಳಪ್ಪಗೆ ಸ್ವಂತ ಜಮೀನು ಇರದ್ದರಿಂದ ಶವಸಂಸ್ಕಾರಕ್ಕೆ ಜಾಗ ಇರಲಿಲ್ಲ, ಗ್ರಾಮದಲ್ಲಿ ಸರ್ಕಾರ ಒದಗಿಸಿದ್ದ ಸ್ಮಶಾನವೂ ಇರಲಿಲ್ಲ. ಹೀಗಾಗಿ ಗ್ರಾಮಸ್ಥರು ಈ ನಿರ್ಧಾರ ಕೈಗೊಂಡಿದ್ದರು.

ಬಳಿಕ ಸ್ಥಳಕ್ಕೆ ಬಾದಾಮಿ ತಹಶೀಲ್ದಾರ ಜೆ.ಬಿ. ಮಜ್ಜಗಿ ಭೇಟಿ ನೀಡಿ ಸಾರ್ವಜನಿಕರ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾದರು. ಆದರೆ ಅದಾಗಲೇ ದಹನ ಕ್ರಿಯೆ ನಡೆಸಲು ಕಟ್ಟಿಗೆ ಕೂಡಿಟ್ಟು ಚಿತೆ ಸಿದ್ಧಪಡಿಸಲಾಗಿತ್ತು. ಚಿತೆ ಮೇಲಿಟ್ಟ ಶವವನ್ನು ತೆಗೆಯುವುದು ಸಂಪ್ರದಾಯಕ್ಕೆ ವಿರೋಧ. ಹೀಗಾಗಿ ಹಿರಿಯರ ಸಲಹೆಯಂತೆ ಶವ ತೆಗೆದು ಅದೇ ಚಿತೆ ಮೇಲೆ ಜೀವಂತ ಕೋಳಿಯನ್ನಿರಿಸಿ ದಹಿಸಲಾಯಿತು. ನಂತರ ಶವವನ್ನು ಗ್ರಾಮದ ಹೊರವಲಯ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ತೆಗೆದುಕೊಂಡು ಹೋದರು.


Spread the love

About Laxminews 24x7

Check Also

ಕಳ್ಳರನ್ನು ಓಡಿಸಲು ದಿಟ್ಟತನ ಮೆರೆದ ಮಹಿಳೆ ಪೃಥ್ವಿ ಸಮಯ ಪ್ರಜ್ಞೆಯಿಂದ ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನು ಓಡಿಸಿದ ಮಹಿಳೆ…!!!

Spread the love ಕಳ್ಳರನ್ನು ಓಡಿಸಲು ದಿಟ್ಟತನ ಮೆರೆದ ಮಹಿಳೆ ಪೃಥ್ವಿ ಸಮಯ ಪ್ರಜ್ಞೆಯಿಂದ ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ