ರಕ್ಷಾ ಬಂಧನ ಅಣ್ಣ-ತಂಗಿಯರ, ಅಕ್ಕ-ತಮ್ಮಂದಿರ ಅತ್ಯಂತ ಪವಿತ್ರವಾದ ಹಬ್ಬ. ಮನೆಯಲ್ಲಿ ತಮ್ಮ ತಂಗಿ, ಅಕ್ಕನ ಕಡೆಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾರೆ. ಆದರೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ತಮ್ಮ ಕ್ಷೇತ್ರದ ಸಾವಿರಾರು ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟುವ ಮೂಲಕ ಅದ್ಧೂರಿಯಾಗಿ ರಕ್ಷಾ ಬಂಧನ ಆಚರಿಸಿದ್ದಾರೆ. ಇದರ ಜೊತೆಗೆ ಎಲ್ಲರೂ ದೀರ್ಘಾಯುಷಿ ಆಗಲಿ ಎಂದು ಪ್ರಾರ್ಥಿಸಿದ್ದಾರೆ.
ಹೌದು ಸ್ವಂತ ಅಣ್ಣ-ತಮ್ಮಂದಿರಂತೆ ಕ್ಷೇತ್ರದ ಜನತೆಗೆ ಅತ್ಯಂತ ಖುಷಿ, ಖುಷಿಯಾಗಿ ರಾಖಿ ಕಟ್ಟುತ್ತಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್. ಸರತಿ ಸಾಲಿನಲ್ಲಿ ನಿಂತು ರಾಖಿ ಕಟ್ಟಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಜನರು. ಮತ್ತೊಂದು ಕಡೆ ಓರ್ವ ಅಭಿಮಾನಿ ತನ್ನ ಕೈ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರದ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿರುವ ದೃಶ್ಯ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿಯ ಕುವೆಂಪು ನಗರದಲ್ಲಿರುವ ಲಕ್ಷ್ಮೀ ಹೆಬ್ಬಾಳ್ಕರ್ ಕಚೇರಿಯಲ್ಲಿ ರಕ್ಷಾ ಬಂಧನ ಹಬ್ಬದ ಸಂಭ್ರಮದಲ್ಲಿ.
ಹೌದು ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುವೆಂಪು ನಗರದ ಕಚೇರಿಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಜನಸಾಗರವೇ ಹರಿದು ಬಂದಿತ್ತು. ಸಾವಿರಾರು ಸಹೋದರರಿಗೆ ಸ್ವತಃ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಾಖಿ ಕಟ್ಟಿ ಸಹೋದರ ಸಂಬಂಧಕ್ಕೆ ಮುನ್ನುಡಿ ಬರೆದರು. ಇನ್ನು ಈ ವೇಳೆ ಎಲ್ಲ ಸಮಾಜದ ಜನರು ಕೂಡ ಭಾಗಿಯಾಗಿದ್ದು ವಿಶೇಷವಾಗಿತ್ತು.