ರಾಜ್ಯ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರು, ಸೋನಿಯಾಗಾಂಧಿಯವರಿಗೆ ಮಾತನಾಡಿದ್ದಾರೆಂಬ ವದಂತಿ ಶುದ್ದ ಸುಳ್ಳು, ನಾನು ಯಾವ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಗುನ್ನಾ, ತಳಮಳ ಎಂಬ ಚರ್ಚೆಗಳು ಆಗತ್ತಾ ಇವೆ. ಆದರೆ ಯಾವುದೇ ರೀತಿಯ ತಳಮಳ, ನಡುಕ ಪಕ್ಷಕ್ಕೆ ಆಗಿಲ್ಲ. ಅದಕ್ಕಾಗಿಯೇ ನಾನು ರಾಜ್ಯಸಭಾ ಚುನಾವಣೆ ಜಂಜಾಟದಿಂದ ದೂರ ಉಳಿದಿದ್ದೆ, ಆದರೆ ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷವನ್ನು ಅವಮಾನ ಮಾಡಲು ಹಲವಾರು ಹೇಳಿಕಡ ನೀಡಿದ್ದಾರೆ, ಪಕ್ಷವನ್ನು ನಿರ್ಣಾಮ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದರು.
ರಾಜಕಾರಣದಲ್ಲಿ ಆಶಾವಾದ ಇರಬೇಕು. ಹಾಗಾಗಿ ನಮ್ಮ ಪಕ್ಷದಿಂದ ರಾಜ್ಯಸಭೆಗೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ. ನಮ್ಮಲ್ಲಿ 32 ಮತಗಳಿವೆ. 3-4 ಜನರಲ್ಲಿ ಅಸಮಾಧಾನ ಇರುವುದು ನಿಜ, ಅವರನ್ನು ವಿಶ್ವಾಸಕ್ಕೆ ಪಡೆಯುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಬಿ ಟೀಮ್ 10 ನೇ ತಾರೀಖ ನಂತರ ಪ್ರಕಟ: ಈವರೆಗೆ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಆರೋಪಿಸಲಾಗುತ್ತಿತ್ತು. ಆದರೆ ಬರುವ ರಾಜ್ಯಸಭೆಯ ಫಲಿತಾಂಶದ ನಂತರ ಯಾರು ಬಿಜೆಪಿಯ ಬಿ ಟೀಮ್ ಹಾಗೂ ನಾಯಕ ಯಾರೆಂದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಯಾರು ಯಾರನ್ನು ಸೋಲ್ಲಿಸಬೇಕೆಂಬುದು ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಬಿಟ್ಟದ್ದು, ಆಗ ನಿಜವಾದ ವಾಸ್ತವ ನಾಡಿನ ಜನತೆಗೆ ಗೊತ್ತಾಗುತ್ತದೆ. ಗೆದ್ದರೇ ಶಕ್ತಿ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ. ಸೋತರೇ ಮತ್ತೊಂದು ರಾಜಕೀಯವಾಗಿ ಅಸ್ತ್ರವಾಗುತ್ತದೆ ಎಂದರು.