ಬೆಳಗಾವಿ: ಒಡ ಹುಟ್ಟಿದ ತಮ್ಮನ ಏಳಿಗೆಯನ್ನೇ ಸಹಿಸದ ಸಹೋದರನೊಬ್ಬ ತಮ್ಮನ ಎದೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಶಿಂಗಳಾಪುರ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಗಳಾಪುರ ಗ್ರಾಮದ ಮಾಳಪ್ಪ ಭೀಮಪ್ಪ ಚಳಾಯಿ (33)ಕೊಲೆಯಾದ ವ್ಯಕ್ತಿ. ಆತನ ಸಹೋದರನಾದ ವಾಶಪ್ಪ ಭೀಮಪ್ಪ ಚಳಾಯಿ ಕೊಲೆ ಮಾಡಿದ ಆರೋಪಿ.
ತಮ್ಮ ಜಮೀನಿನಲ್ಲಿ ದುಡಿದು ಶ್ರೀಮಂತನಾಗುತ್ತಿರುವುದನ್ನು ಕಂಡು ಹೊಟ್ಟೆ ಕಿಚ್ಚಿನಿಂದ ಅಣ್ಣನೇ ತಮ್ಮನ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಊರಲ್ಲಿನ ಜಮೀನಲ್ಲದೇ, ಪ್ರಭಾಶುಗರ್ಸ್ ಒಡೆತನದ ಜಮೀನನ್ನು ಪಡೆದು ಪಾಲುದಾರಿಕೆ ಮೂಲಕ ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿ ಟ್ರಾಕ್ಟರ್, ಕಾರು ಖರೀದಿ ಜೊತೆಗೆ ಊರಲ್ಲಿ ಹೆಸರು ಮಾಡಿಕೊಂಡಿದ್ದನು. ಇದನ್ನ ಸಹಿಸಲಾಗದೆ ಆತನ ಅಣ್ಣ ವಾಶಪ್ಪ ತಮ್ಮನ ಮೇಲೆ ದ್ವೇಷ ಸಾಧಿಸುತ್ತಿದ್ದ. ಇದರಿಂದ ಆಗಾಗ ತಮ್ಮನ ಮೇಲೆ ಗಲಾಟೆ ಮಾಡುತ್ತಿದ್ದ ಎನ್ನಲಾಗ್ತಿದೆ.
ನಂತರ ಒಂದು ದಿನ ಸಂಚು ಪ್ಲಾನ್ ಮಾಡಿಕೊಂಡು ಸ್ಥಳಕ್ಕೆ ಬಂದಿದ್ದ ವಾಶಪ್ಪ ಮಾಳಪ್ಪನ ಎದೆಯ ಮೇಲೆ ಕಲ್ಲು ಹಾಕಿ ಬಳಿಕ ಅದೇ ಕಲ್ಲಿನಿಂದ ಚುಚ್ಚಿದ್ದಾನೆ. ನಂತರ ಹಾರೆಕೋಲು ಮೂಲಕ ಮನಸ್ಸೋಯಿಚ್ಛೆ ಎಲ್ಲೆಂದರಲ್ಲಿ ಹೊಡೆದು ಕೊಲೆಗೈದಿದ್ದಾನೆ. ಇತ್ತ ಕೊಲೆ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆತನ ಮೇಲೆ ಕ್ರಮವಾಗಬೇಕು. ಅವನನ್ನ ಜೈಲಿನಿಂದ ಬಿಡುಗಡೆ ಮಾಡಬೇಡಿ ಅವನಿಂದ ನಮಗೂ ಜೀವಬೇದರಿಕೆ ಇದೆ ಅಂತ ಹೇಳುತ್ತಿದ್ದಾರೆ.
ಘಟನೆ ಕುರಿತಂತೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿ ವಾಶಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಕೊಲೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಅಂತ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಪೊಲೀಸರು ಸತ್ಯಾಸತ್ಯತೆಯನ್ನ ಬಯಲಿಗೆಳೆಯಬೇಕಿದೆ. ಒಟ್ಟಿನಲ್ಲಿ ಒಡಹುಟ್ಟಿದ ಸಹೋದರನ ಬೆಳವಣಿಗೆ ಸಹಿಸದ ಅಣ್ಣ ತಮ್ಮನ ಕೊಲೆಗೈದಿರುವುದು ವಿಪರ್ಯಾಸದ ಸಂಗತಿ.
Laxmi News 24×7