ಬೆಂಗಳೂರು : ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತು ರಾಜ್ಯ ಸರ್ಕಾರದ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ಆದೇಶ ಹೊರಡಿಸಿದ್ದು, ಈ ಕೂಡಲೇ ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿ ಆದೇಶ ಹೊರಡಿಸಿದೆ.
ಪಾದಯಾತ್ರೆಯ ವಾಹನ ಸಂಚಾರ,ಜನಸಂಚಾರ ನಿಷೇಧಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರದ ಆದೇಶ ಉಲ್ಲಂಘಿಸಿ ಪಾದಯಾತ್ರೆ ಮುಂದುವರೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.
ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿ ಪಿಐಎಲ್ ವಿಚಾರಣೆ ನಡೆಸಿ ಹೈಕೋರ್ಟ್ ವಿಭಾಗೀಯ ಪೀಠ, ಕೋವಿಡ್ ಹೆಚ್ಚಳದ ವೇಳೆ ಪಾದಯಾತ್ರೆ ನಡೆಸುತ್ತಿದ್ದೀರಾ? ಪಾದಯಾತ್ರೆಗೂ ಮುನ್ನ ನೀವು ಅನುಮತಿ ಪಡೆದಿದ್ದೀರಾ? ಎಂದು ಹೈಕೋರ್ಟ್ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿತ್ತು. ಸರ್ಕಾರ ಪಾದಯಾತ್ರೆ ತಡೆಯಲು ಅಸಮರ್ಥವಾಗಿದೆಯೇ?ಅನುಮತಿ ಕೊಟ್ಟಿಲ್ಲದಿದ್ದರೂ ಯಾರಿಗಾಗಿ ಕಾಯುತ್ತಿದ್ದೀರಿ? ಸರ್ಕಾರ ಸಂಪುರ್ಣ ಅಸಮರ್ಥವಾಗಿದೆ.ಸಾರ್ವಜನಿಕರ ಹಿತಾಸಕ್ತಿ ವಿರುದ್ಧ ಅನುಮತಿ ಇಲ್ಲದಿದ್ದರೂ ರ್ಯಾಲಿ ಮಾಡುತ್ತೀರುವ ಕಾಂಗ್ರೆಸ್ ವಿರುದ್ಧ ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡಿತ್ತು. ಈ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ.