ಬೆಂಗಳೂರು: ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ (ಕೆಎಂಸಿ) ನಡೆದಿದ್ದ ಚುನಾವಣೆ ರದ್ದುಗೊಳಿಸಿರುವ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ.
ಡಾ.ಮಧುಸೂಧನ ಕರಿಗನೂರು ಮತ್ತು ಇತರರು ಸಲ್ಲಿಸಿದ್ದ ರಿಟ್ ಮೇಲ್ಮನವಿ ಪರಿಶೀಲಿಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ನೇತೃತ್ವದ ವಿಭಾಗೀಯ ಪೀಠ, ಮಧ್ಯಂತರ ಆದೇಶ ನೀಡಿದೆ. ಈ ವಿಷಯದ ಬಗ್ಗೆ ವಿವರಣೆ ಅಗತ್ಯವಿದೆ ಎಂದು ತಿಳಿಸಿದ ಪೀಠ, ಕೆಎಂಸಿ ರಿಜಿಸ್ಟ್ರಾರ್ ಅವರಿಗೆ ನೋಟಿಸ್ ನೀಡಲು ಆದೇಶಿಸಿತು.
‘2020ರ ಜನವರಿ 23ರಂದು ಚುನಾವಣೆ ನಡೆದಿದ್ದು, ಮತದಾರರ ಪಟ್ಟಿ ಅಂತಿಮಗೊಳಿಸುವಲ್ಲಿಯೂ ಲೋಪ ಆಗಿದೆ. ಮತದಾರರ ಪಟ್ಟಿಗೆ ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಚುನಾವಣಾಧಿಕಾರಿ ಪರಿಗಣಿಸಿರಲಿಲ್ಲ. ಈ ಕ್ರಮಗಳು ಕಾನೂನುಬಾಹಿರ’ ಎಂದು ಏಕ ಸದಸ್ಯ ಪೀಠ ತಿಳಿಸಿತ್ತು. ಹೊಸದಾಗಿ ಚುನಾವಣೆ ನಡೆಸಲು 2021ರ ಜೂನ್ 7 ರಂದು ಆದೇಶಿಸಿತ್ತು.
‘ಚುನಾವಣಾಧಿಕಾರಿಯಿಂದ ಆಗಿರುವ ಲೋಪದ ಬಗ್ಗೆ ಅನುಮಾನ ಇದೆಯೇ ಹೊರತು ಸಾಬೀತಾಗಿಲ್ಲ’ ಎಂದು ಮೇಲ್ಮನವಿಯಲ್ಲಿ ವಾದಿಸಲಾಗಿದೆ. ವಿಚಾರಣೆಯನ್ನು ಪೀಠ ಸೆ.22ಕ್ಕೆ ಮುಂದೂಡಿತು.
Laxmi News 24×7