ಬೆಂಗಳೂರು: ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕಿದ್ದಾರೆ. ವಯಸ್ಸು ಆಗಿದೆ ಎಂದು ತೆಗೆದಿಲ್ಲ. ಬದಲಾಗಿ ದುಡ್ಡು ಹೊಡೆದ್ರು ಅಂತಾ ತೆಗೆದಿದ್ದು. ಅಪ್ಪ-ಮಗ ಜೋಡಿ ಲೂಟಿ ಮಾಡಿದರು ಅಂತಾ ತೆಗೆದರು ಎಂದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಐಟಿ, ಇಡಿ ಇದೆ ಎಂದು ಹೇಳಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದಾರೆ. ಆರ್ಟಿಜಿಎಸ್ ಮೂಲಕ ಯಡಿಯೂರಪ್ಪ ಹಣ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ ಮದುವೆ ಊಟ ಮಾಡೇ ಇಲ್ಲ. ಬರೀ ತಿಥಿ ಊಟ ಮಾಡಿದವರು ಅವರು. ಅವರಿಗೆ ಮುಂಬಾಗಿಲಿಂದ ಬಂದು ಗೊತ್ತೇ ಇಲ್ಲ. ಹಿಂಬಾಗಿಲಿಂದ ಬಂದವರೇ. ನಮ್ಮ ಎಂಎಲ್ಎಗಳನ್ನು ಕರೆದುಕೊಂಡು ಸರ್ಕಾರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇನ್ನು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಈಗ ಮಾತಾಡಲ್ಲ. ಹೋಗಲಿ ಮೂರು-ನಾಲ್ಕು ತಿಂಗಳು, ಆಮೇಲೆ ಅವರ ಬಗ್ಗೆ ಮಾತಾಡುತ್ತೇನೆ. ಬೊಮ್ಮಾಯಿಯನ್ನು ಸಿಎಂ ಮಾಡಿದ್ದು ಯಡಿಯೂರಪ್ಪ. ಹಾಗಾಗಿ ಅವರು (ಬೊಮ್ಮಾಯಿ) ಎನು ಮಾಡ್ತಾರೆ? ಸ್ಟ್ಯಾಂಪ್ ಆಗುವುದು ಬಿಟ್ಟು ಎಂದು ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕಟಕಿಯಾಡಿದ್ದಾರೆ.
ಕೋವಿಡ್ ಬರೋಕೆ ಪದ್ಮನಾಭ ನಗರ ಕ್ಷೇತ್ರದ ಆರ್ ಅಶೋಕ ಕಾರಣ.. ಸಿದ್ದರಾಮಯ್ಯ ಆಕ್ಷೇಪಾರ್ಹ ಹೇಳಿಕೆ:
ಕೋವಿಡ್ ಬರೋಕೆ ಈ ಕ್ಷೇತ್ರದ ಶಾಸಕ ಆರ್ ಅಶೋಕ ಕಾರಣ ಎಂದು ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗ. ನಾವು ಕಂಡು, ಕೇಳಿರಲಿಲ್ಲ. ಚೀನಾದಿಂದ ನಮ್ಮ ದೇಶಕ್ಕೆ ಬಂದಿದೆ.. ಕೋವಿಡ್ ಬರೋಕೆ ನಾವು ಕಾರಣನಾ? ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ. ಕೋವಿಡ್ ಬರೋಕೆ ಈ ಕ್ಷೇತ್ರದ (ಪದ್ಮನಾಭ ನಗರ -Padmanabhanagar) ಆರ್ ಅಶೋಕ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪಾರ್ಹವಾಗಿ ಟೀಕಿಸಿದ್ದಾರೆ.
ಅವರು (ಆರ್ ಅಶೋಕ- r ashok) ಸಿಎಂ ಆಗದೆ ಇರಬಹುದು.. ಆದ್ರೆ ಕಂದಾಯ ಸಚಿವರಾಗಿದ್ದರಲ್ಲ. ಅಶೋಕ ಅವರನ್ನು ಅನೇಕ ಭಾರಿ ಗೆಲ್ಲಿಸಿದ್ದೀರಿ. ಜನರಿಗೆ ಆಹಾರ, ಔಷಧಿ, ಬೆಡ್ ಗಳು ಕೊಡುವುದು ಅಶೋಕ್ ಜವಾಬ್ದಾರಿ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈದಾನ ಅಶೋಕ್ ಅವರ ಅಪ್ಪನ ಮನೆ ಆಸ್ತಿನಾ? ಅಧಿಕಾರಗಳು ಎಚ್ಚರಿಕೆಯಿಂದ ಇರಬೇಕು:
ಪದ್ಮನಾಭನಗರದಲ್ಲಿ ಕಾರ್ಯಕ್ರಮ ನಡೆಸಲು ಅಶೋಕ್ ಅನುಮತಿ ಪಡೆಯಬೇಕಂತೆ! ಈ ಮೈದಾನ ಏನೂ ಅಶೋಕ್ ಅವರ ಅಪ್ಪನ ಮನೆ ಆಸ್ತಿನಾ? ಇದು ಪಬ್ಲಿಕ್ ಪ್ರಾಪರ್ಟಿ. ಅಧಿಕಾರಿಗಳು ಇದಕ್ಕೆ ಮಣೆ ಹಾಕಬಾರದು ಎಂದು ಕಟಕಿಯಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಗಳು ಎಚ್ಚರಿಕೆಯಿಂದ ಇರಬೇಕು. ಅಶೋಕ ಒಬ್ಬ ಶಾಸಕ ಅಷ್ಟೇ.. ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿಕಾರಿಗಳನ್ನೂ ಎಚ್ಚರಿಸಿದರು.