ಚಿಕ್ಕೋಡಿ: ಕರ್ನಾಟಕದ ಸಚಿವೆಯಾಗಿದ್ದರೂ, ತಮ್ಮ ಕ್ಷೇತ್ರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮರಾಠಿ ಪ್ರೇಮವನ್ನು ಮತ್ತೆ ಮುಂದುವರೆಸಿದ್ದಾರೆ.
ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾ ಗ್ರಾಮದಲ್ಲಿ ಏತ ನೀರಾವರಿ ಉದ್ಘಾಟನೆ ಸಂದರ್ಭದಲ್ಲಿ ಸಂಪೂರ್ಣವಾಗಿ ಮರಾಠಿ ಭಾಷೆಯಲ್ಲಿ ಬ್ಯಾನರ್ ಅಳವಡಿಸಿದ್ದ ಸಮಾರಂಭದಲ್ಲಿ ಶಶಿಕಲಾ ಜೊಲ್ಲೆ ಅವರು ಭಾಗಿಯಾಗುವುದರ ಜೊತೆಗೆ ಮರಾಠಿ ಭಾಷೆಯ ಪ್ರೇಮವನ್ನು ಎತ್ತಿ ತೋರಿಸಿದ್ದಾರೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾ ಗ್ರಾಮದಲ್ಲಿ ಮಂಜೂರಾದ 1 ಕೋಟಿ 49 ಲಕ್ಷ ರೂ. ಮೊತ್ತದಲ್ಲಿ ದೂಧಗಂಗಾ ನದಿಯಿಂದ ಏತ ನೀರಾವರಿ ಯೋಜನೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಸಮಾರಂಭ ಸಂಪೂರ್ಣ ಮರಾಠಿಮಯವಾಗಿತ್ತು. ಅಧಿಕಾರ ಅನುಭವಿಸಲು ಕರ್ನಾಟಕ ಬೇಕು, ಆದರೆ ಮರಾಠಿ ವೋಟ್ ಬ್ಯಾಂಕ್ ಗಾಗಿ ಕನ್ನಡವನ್ನು ನಿರ್ಲಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಚಿವೆ ಶಶಿಕಲಾ ಜೊಲ್ಲೆ ವಿರುದ್ದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.