ನವದೆಹಲಿ: ದೇಶದಲ್ಲಿ ಗಮನಾರ್ಹ ಪ್ರಮಾಣದ ಜನಸಂಖ್ಯೆಗೆ ಲಸಿಕೆ ನೀಡುವವರೆಗೆ ವಿದೇಶಗಳಿಗೆ ಲಸಿಕೆ ರಫ್ತು ಮಾಡುವುದನ್ನು ತಡೆಯ ಹಿಡಿಯಲಾಗಿದೆ ಎಂದು ಕೋವಿಡ್ -19 ಕಾರ್ಯಪಡೆಯ ಮುಖ್ಯಸ್ಥ ಎಂದು ವಿನೋದ್ ಕೆ. ಪಾಲ್ ತಿಳಿಸಿದ್ದಾರೆ.
ಲಸಿಕೆ ರಫ್ತು ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವಲ್ಲಿ ನಿಖರವಾದ ಸಮಯದ ಚೌಕಟ್ಟು ಇಲ್ಲ ಎಂದು ವಿನೋದ್ ಕೆ. ಪಾಲ್ ಅವರೊಂದಿಗಿನ ಸಂದರ್ಶನವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ‘ಎಎಫ್ಪಿ’ ವರದಿ ಮಾಡಿದೆ.
ಕೋವಿಡ್ ಎರಡನೇ ಅಲೆ ದೇಶಕ್ಕೆ ಪ್ರಬಲ ಹೊಡೆತ ನೀಡಿದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಏಪ್ರಿಲ್ನಲ್ಲಿ ಕೋವಿಡ್ ಲಸಿಕೆ ರಫ್ತು ನಿಷೇಧಿಸಿತು. ಈ ವರ್ಷದ ಅಂತ್ಯದವರೆಗೆ ಲಸಿಕೆಯನ್ನು ತಲುಪಿಸಲು ಸಾಧ್ಯವಾಗುವುದಿಲ್ಲ ಎಂದು ವಿಶ್ವದ ಅತಿದೊಡ್ಡ ಲಸಿಕೆ ಸರಬರಾಜುದಾರ ಸಂಸ್ಥೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಇತ್ತೀಚೆಗೆ ಹೇಳಿತ್ತು.
ದೇಶದಲ್ಲಿ ಒಟ್ಟು 2.98 ಕೋಟಿ ಜನರಿಗೆ ಕೋವಿಡ್ ಬಂದಿದೆ. 3.80 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಆದರೆ, ಅಧಿಕೃತ ಸಂಖ್ಯೆಗಿಂತಲೂ ವಾಸ್ತವದ ಸಂಖ್ಯೆ ಅಧಿಕವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.