Breaking News

ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ: ಯೋಧನಿಂದ ಜಿಲ್ಲಾಧಿಕಾರಿಗೆ ದೂರು

Spread the love

ಬೆಳಗಾವಿ: ‘ದೇವಸ್ಥಾನದ ಜಾಗದ ವಿಚಾರವಾಗಿ ಗ್ರಾಮದ ಪಂಚಸಮಿತಿಯವರು ತಮ್ಮ ಕುಟುಂಬಕ್ಕೆ ಆರು ತಿಂಗಳಿಂದಲೂ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ’ ಎಂದು ಯೋಧ, ತಾಲ್ಲೂಕಿನ ಗೌಂಡವಾಡದ ದೀಪಕ್ ಪಾಟೀಲ ಆರೋಪಿಸಿದರು.

ಸೇನಾ ಸಮವಸ್ತ್ರದಲ್ಲಿ ಕುಟುಂಬ ಸಮೇತವಾಗಿ ಬಂದು ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮದ್ರಾಸ್ ರೆಜಿಮೆಂಟ್‌ಗೆ ಸೇರಿದ ನಾನು ಶ್ರೀನಗರದಲ್ಲಿ ಹವಾಲ್ದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಗ್ರಾಮದವರು ಕೇಳುತ್ತಿರುವ 5 ಎಕರೆ ಜಮೀನು ನಮ್ಮ ಕಾಕಾ ಅಶೋಕ ಪಾಟೀಲ ಅವರಿಗೆ ಸೇರಿದ್ದಾಗಿದೆ. ಅವರಿಗೆ ಬೆಂಬಲ ಕೊಡುತ್ತಿದ್ದೇವೆ ಎಂದು ಪಂಚಸಮಿತಿಯವರು ನಮಗೆ ಬಹಿಷ್ಕಾರ ಹಾಕಿದ್ದಾರೆ’ ಎಂದು ತಿಳಿಸಿದರು.

‘ಗಣಪತಿ, ಕಾಲಭೈರವ ದೇವಸ್ಥಾನಕ್ಕೆ ಸೇರಿದ ಜಮೀನದು ಎಂದು ಪಂಚರು ಹೇಳುತ್ತಿದ್ದಾರೆ. ವಿವಾದ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ನೀಡುವ ತೀರ್ಪಿನಂತೆ ಆಗಲಿ. ಹೀಗಿರುವಾಗ, ನಮಗೆ ಬಹಿಷ್ಕಾರ ಹಾಕುವುದು ಎಷ್ಟು ಸರಿ? ನಮ್ಮ ಜಮೀನಿನ ಕೆಲಸಕ್ಕೆ ಯಾರೂ ಬಾರದಂತೆ ಮಾಡಿದ್ದಾರೆ. ಅಂಗಡಿಗೆ, ದೇವಸ್ಥಾನಕ್ಕೆ ನಿರ್ಬಂಧಿಸಿದ್ದಾರೆ. ತರಕಾರಿ ಖರೀದಿಗೂ ತೊಂದರೆ ಕೊಡುತ್ತಿದ್ದಾರೆ. ಮಕ್ಕಳೊಂದಿಗೂ ಮಾತನಾಡುತ್ತಿಲ್ಲ. ನಮ್ಮೊಂದಿಗೆ ಯಾರಾದರೂ ಮಾತನಾಡಿದರೆ ₹ 1ಸಾವಿರ ದಂಡ ವಿಧಿಸುವುದಾಗಿ ತಿಳಿಸಿದ್ದಾರೆ’ ಎಂದು ಆರೋಪಿಸಿದರು.

‘ಹೋದ ವರ್ಷವೂ ನಮ್ಮ ಮನೆ ಮೇಲೆ ಕೆಲವರು ದಾಳಿ ಮಾಡಿದ್ದರು. ಇದೇ 6ರಂದು ಮತ್ತೆ ದಾಂದಲೆ ನಡೆಸಿದ್ದಾರೆ. ಮನೆಯ ಟಿವಿ, ಪೀಠೋಪಕರಣ ಹಾಳು ಮಾಡಿದ್ದಾರೆ. ಈ ಬಗ್ಗೆ ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಹಲವು ವರ್ಷಗಳಿಂದ ದೇಶ ರಕ್ಷಣೆ ಸೇವೆ ಮಾಡುತ್ತಿದ್ದೇನೆ. ಆದರೆ, ಕುಟುಂಬದವರನ್ನು ರಕ್ಷಿಸಿಕೊಳ್ಳಲು ಆಗುತ್ತಿಲ್ಲ. ದೇಶ ಸೇವೆ ಮಾಡುತ್ತಿರುವುದಕ್ಕೆ ಪ್ರಯೋಜನವೇನು?’ ಎಂದು ಕೇಳಿದರು. ‘ಅಧಿಕಾರಿಗಳು ನ್ಯಾಯ ಕೊಡಿಸಬೇಕು’ ಎಂದು ಕೋರಿದರು.

ಜೂನ್‌ 6ರಂದು ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಗೆ ನಡೆದಿತ್ತು. ತಲಾ 8 ಮಂದಿ ವಿರುದ್ಧ ಕಾಕತಿ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿತ್ತು.


Spread the love

About Laxminews 24x7

Check Also

ಮಳೆಯಿಂದ ಕ್ಷೀರಧಾರೆಯಂತೆ ಧುಮ್ಮಿಕ್ಕುತ್ತಿರುವ ಅಂಬೋಲಿ ಜಲಪಾತ

Spread the loveಬೆಳಗಾವಿ: ಪಶ್ಚಿಮಘಟ್ಟದಲ್ಲಿ ಉತ್ತಮ ಮಳೆ ಆಗುತ್ತಿದ್ದು, ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಅದರಲ್ಲೂ ಕಡಿದಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ