ಬೆಂಗಳೂರು, ಜೂನ್ 15: ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂದಾಗಿರುವ ಬಿಬಿಎಂಪಿ, ನಗರದ ಗಡಿಯಲ್ಲಿ ರ್ಯಾಂಡಮ್ ಪರೀಕ್ಷಾ ತಂಡಗಳನ್ನು ನಿಯೋಜಿಸಲು ಮುಂದಾಗಿದ್ದಾರೆ.
ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ಕಾರ್ಖಾನೆ, ಗಾರ್ಮೆಂಟ್ಸ್, ಕಚೇರಿಗಳು ಕೂಡ ಮುಚ್ಚಿದ್ದವು, ಇದರಿಂದಾಗಿ ಕೆಲಸವಿಲ್ಲದೆ ತಮ್ಮ ಊರುಗಳಿಗೆ ಹೋಗಿದ್ದ ಕಾರ್ಮಿಕರು, ಉದ್ಯೋಗಿಗಳು ಲಾಕ್ಡೌನ್ ತೆರವಿನಿಂದಾಗಿ ಪುನಃ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ.
ಸೋಂಕು ಹೆಚ್ಚಿರುವ ಜಿಲ್ಲೆಗಳು ಸೇರಿ ವಿವಿಧ ಜಿಲ್ಲೆಗಳ ಕಡೆಗಳಿಂದ ಕಟ್ಟಡ ಕಾರ್ಮಿಕರು, ಕಾರು, ಆಟೋ ಚಾಲಕರು, ಗಾರ್ಮೆಂಟ್ಸ್ ಕಾರ್ಮಿಕರು ಒಳಗೊಂಡಂತೆ ಹಲವರು ಹಿಂದಿರುಗಿ ಬರುತ್ತಿರುವುದರಿಂದ ಮತ್ತೆ ನಗರದಲ್ಲಿ ಸೋಂಕು ಹೆಚ್ಚುವ ಭೀತಿ ಎದುರಾಗಿದೆ.
ಬೇರೆ ಜಿಲ್ಲೆಗಳಿಂದ ನಗರಕ್ಕೆ ಬರುವ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡುವುದು ಕಚ್ಟ ಹಾಗೆಯೇ ನಗರಕ್ಕೆ ಬರುವವರೆಲ್ಲರಿಗೂ ಕೋವಿಡ್ ವರದಿ ತೆಗೆದುಕೊಂಡು ಬರುವಂತೆ ಸೂಚಿಸಿ, ಅದನ್ನು ಪರಿಶೀಲಿಸಿ ಒಳ ಬಿಡುವ ಚಿಂತನೆಯಿದ್ದರೂ ವಾಸ್ತವವಾಗಿ ಜಾರಿಗೆ ತರಲು ವಿಪರೀತ ಸಿಬ್ಬಂದಿ ಹಾಗೂ ಪರಿಶ್ರಮದ ಅಗತ್ಯಬೀಳುತ್ತದೆ.
ಬೆಂಗಳೂರು ಪ್ರವೇಶಿಸುವ ಎಲ್ಲಾ ಗಡಿಗಳಲ್ಲಿ ಸಂಚಾರಿ ಪರೀಕ್ಷಾ ತಂಡಗಳು ಇರಲಿದ್ದು, ರ್ಯಾಂಡಮ್ ಪರೀಕ್ಷೆ ನಡೆಸಲಿವೆ. ಸೋಂಕಿತರು ಪತ್ತೆಯಾದರೆ ಕೂಡಲೇ ಅವರನ್ನು ಹೋಂ ಐಸೊಲೇಷನ್ ಮಾಡುವ ಬದಲು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಐಸೊಲೇಷನ್ ಮಾಡಲು ಪಾಲಿಕೆ ಚಿಂತನೆ ನಡೆಸಿದೆ.
ತುಮಕೂರು ರಸ್ತೆ, ಹೊಸ ಕೋಟೆ ಗಡಿಭಾಗ, ಮೈಸೂರು ರಸ್ತೆ, ದೊಡ್ಡಬಳ್ಳಾಪುರ, ಬಳ್ಳಾರಿ ರಸ್ತೆ ಸೇರದಂತೆ ಹಲವು ಭಾಗಗಳಲ್ಲಿ ಸಂಚಾರಿ ಪರೀಕ್ಷೆ ತಂಡಗಳು ಕಾರ್ಯನಿರ್ವಹಿಸಲಿವೆ.
ಜತೆಗೆ ಲಸಿಕೆ ಅಭಿಯಾನಕ್ಕೂ ಆದ್ಯತೆ ನೀಡಲು ಬಿಬಿಎಂಪಿ ಯೋಜಿಸಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Laxmi News 24×7