Breaking News

ಬೆಳಗಾವಿಯಲ್ಲಿ ಮಕ್ಕಳ ಲಸಿಕೆ ಪ್ರಯೋಗ

Spread the love

ಬೆಳಗಾವಿ: ಕೋವಿಡ್ ಮೂರನೇ ಅಲೆ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಹದಿನೆಂಟಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗೂ ಲಸಿಕೆ ನೀಡುವ ಸಂಬಂಧ ಪ್ರಯೋಗಗಳಿಗೆ ವೇಗ ದೊರೆತಿದೆ. ಝೈಡಸ್‌ ಕ್ಯಾಡಿಲಾ ಕಂಪೆನಿ ಅಭಿವೃದ್ಧಿಪಡಿಸುತ್ತಿರುವ ಝೈಕೋವ್‌-ಡಿ ಮೂರು ಹಂತದ ವೈದ್ಯ ಕೀಯ ಪ್ರಯೋಗ (ಕ್ಲಿನಿಕಲ್‌ ಟ್ರಯಲ್ಸ್‌) ನಲ್ಲಿ ರಾಜ್ಯದ 1,500ಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿದ್ದಾರೆ.

ವಿಶೇಷವೆಂದರೆ ವಯಸ್ಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಕೊವ್ಯಾಕ್ಸಿನ್‌ ಹಾಗೂ ಕೊವಿಶೀಲ್ಡ್‌ 2 ಡೋಸ್‌ಗಳಿದ್ದರೆ, ಮಕ್ಕಳಿಗೆ ಪ್ರಯೋಗ ಮಾಡುತ್ತಿರುವ ಈ ಲಸಿಕೆ ಮೂರು ಡೋಸ್‌ನಲ್ಲಿರಲಿದೆ. ಈಗಾಗಲೇ ಮೊದಲ ಡೋಸ್‌ ಅನ್ನು 12ರಿಂದ 18 ವಯಸ್ಸಿನೊಳಗಿನ ಮಕ್ಕಳಿಗೆ ನೀಡಲಾಗಿದೆ. ಇದುವರೆಗೆ ಅಡ್ಡ ಪರಿಣಾಮಗಳು ವರದಿಯಾಗಿಲ್ಲ. ಎರಡನೇ ಡೋಸ್‌ ನೀಡಲು ಸಿದ್ಧತೆ ನಡೆದಿದೆ. ಮೊದಲ ಡೋಸ್‌ ಆದ ಬಳಿಕ 28 ದಿನಗಳಿಗೆ ಎರಡನೇ ಡೋಸ್‌ ನೀಡಲಾಗುವುದು. 54 ದಿನಗಳ ಬಳಿಕ ಮೂರನೇ ಡೋಸ್‌ ನೀಡಲಾಗುವುದು.

ಈ ಹಿಂದೆ ಕೊವ್ಯಾಕ್ಸಿನ್‌ ಲಸಿಕೆ ಕ್ರಿನಿಕಲ್‌ ಟ್ರಯಲ್ಸ್‌ ನಡೆಸಿದ್ದ ಬೆಳಗಾವಿಯ ಜೀವನ ರೇಖಾ ಆಸ್ಪತ್ರೆ ಈ ಪ್ರಯೋಗದಲ್ಲಿ ಪಾಲ್ಗೊಂಡಿದೆ. ಬೆಳಗಾವಿಯ ತಲಾ 10 ಬಾಲಕ, ಬಾಲಕಿಯರನ್ನು ಸ್ವಯಂ ಸೇವಕ ರನ್ನಾಗಿ ಆಯ್ಕೆ ಮಾಡಲಾಗಿದ್ದು, ಮೊದಲ ಡೋಸ್‌ ನೀಡಲಾಗಿದೆ. ಪ್ರತಿ ಡೋಸ್‌ ನೀಡಿದ ಬಳಿಕ ಅವರಲ್ಲಿಯ ರೋಗ ನಿರೋಧಕ ಶಕ್ತಿ ಪರೀಕ್ಷಿಸಲು ರಕ್ತದ ಮಾದರಿ ಸಂಗ್ರಹಿಸಲಾಗುತ್ತದೆ. ಪ್ರಸ್ತುತ ಲಸಿಕೆ ಪಡೆದ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎನ್ನುತ್ತಾರೆ ಜೀವನ ರೇಖಾ ಆಸ್ಪತ್ರೆಯ ಡಾ| ಅಮಿತ್‌ ಭಾತೆ. ಇದಲ್ಲದೆ ಕೋವ್ಯಾಕ್ಸಿನ್‌ ಲಸಿಕೆಯನ್ನು ಸಹ ಮಕ್ಕಳ ಮೇಲೆ ಪ್ರಯೋಗ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಕ್ಕಳ ಮೇಲೆ ಮೂರನೇ ಅಲೆ ಹೆಚ್ಚಿನ ದುಷ್ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿ ಪ್ರಾಯಪಡುತ್ತಿದ್ದಾರೆ. ಈಗ ಲಸಿಕೆ ಪ್ರಯೋಗ ನಡೆದಿರುವುದು ಕೊಂಚ ಸಮಾಧಾನ ತರುವ ಬೆಳವಣಿಗೆಯಾಗಿದೆ.

ಕೊವ್ಯಾಕ್ಸಿನ್‌ ಪ್ರಯೋಗ ಜಾರಿ :

ಫೈಜರ್‌ ಲಸಿಕೆಯನ್ನು ಮಕ್ಕಳಿಗೆ (12 ರಿಂದ 15 ವಯಸ್ಸಿನವರಿಗೆ) ತುರ್ತು ಸಂದರ್ಭದಲ್ಲಿ ಬಳಸಲು ಅಮೆರಿಕ, ಕೆನಡಾದ ಬಳಿಕ ಸಿಂಗಾಪುರ್‌ ಹಾಗೂ ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ) ಅನುಮತಿ ನೀಡಿವೆ. ಇದೇ ಸಂದರ್ಭದಲ್ಲಿ ಯುರೋಪಿಯನ್‌ ಮೆಡಿಕಲ್‌ ಏಜೆನ್ಸಿ ಸಹ ಮಕ್ಕಳಿಗೆ ಫೈಜರ್‌ ಲಸಿಕೆ ಬಳಸುವ ಕುರಿತು ಪರಿಶೀಲನೆಯಲ್ಲಿದೆ.

ಇದೇ ಹೊತ್ತಿನಲ್ಲಿ ಭಾರತದಲ್ಲೂ ಮಕ್ಕಳಿಗೆ ಲಸಿಕೆ ನೀಡುವ ಕುರಿತು ಕೇಂದ್ರ ಸರಕಾರ ಪ್ರಕ್ರಿಯೆ ಆರಂಭಿಸಿದೆ. ಡ್ರಗ್ಸ್‌ ಕಂಟ್ರೋಲರ್‌ ಜನರಲ್‌ ಕಚೇರಿಯು, 2ರಿಂದ 18ರೊಳಗಿನ ವಯಸ್ಸಿನ ಮಕ್ಕಳಲ್ಲಿ ಕೊವ್ಯಾಕ್ಸಿನ್‌ ನ ಕೊವ್ಯಾಕ್ಸಿನ್‌ನ ಎರಡು ಮತ್ತು ಮೂರನೇ ಹಂತದ ವೈದ್ಯಕೀಯ ಪ್ರಯೋಗ ನಡೆಸಲು ಭಾರತ್‌ ಬಯೋಟೆಕ್‌ ನವರಿಗೆ ಅನುಮತಿ ನೀಡಿದೆ. ಹದಿನೈದು ದಿನಗಳೊಳಗೆ ಪ್ರಯೋಗ ಆರಂಭವಾಗುವ ಸಂಭವವಿದೆ.

ವೈದ್ಯಕೀಯ ಪರಿಣಿತರ ಪ್ರಕಾರ ಅಂದಾಜು ಅಕ್ಟೋಬರ್‌ ಸುಮಾರಿನಲ್ಲಿ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ.


Spread the love

About Laxminews 24x7

Check Also

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ

Spread the love ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚಿಕ್ಕೋಡಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ