ಹೈದರಾಬಾದ್: ಹಣದ ಮೇಲಿನ ದುರಾಸೆಯಿಂದ ಕೆಲವರು ಕಳ್ಳತನಕ್ಕೆ ಇಳಿಯುವುದನ್ನು ನಾವು ನೋಡಿದ್ದೇವೆ. ಇನ್ನು ಕೆಲವರು ತಮ್ಮ ಅಗತ್ಯ ಪೂರೈಸಿಕೊಳ್ಳಲು ಕಳ್ಳತನ ಮಾಡುತ್ತಾರೆ. ಏನೇ ಆಗಲಿ ಕಳ್ಳತನ ಮಾಡುವುದು ಅಪರಾಧವೇ. ಆದರೆ, ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಇಲ್ಲೊಬ್ಬ ಖದೀಮ ತುಂಬಾ ಭಯಾನಕ. ಏಕೆಂದರೆ ಈತ ಹಣ, ಆಭರಣ ಕದ್ದಿದ್ದಲ್ಲದೆ, ಹೆಣ್ಣು ಮಕ್ಕಳ ಶೀಲವನ್ನು ದೋಚಿದ್ದಾನೆ.
ಇನ್ನು ಪೊಲೀಸ್ ವಿಚಾರಣೆಯಲ್ಲಿ ಖದೀಮ ಆಘಾತಕಾರಿ ವಿಚಾರಗಳನ್ನು ಬಿಚ್ಚಿಟ್ಟಿದ್ದು, ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ. ಅಂದಹಾಗೆ ಮಾನವ ರೂಪದ ರಾಕ್ಷಸನ ಹೆಸರು ಹುಸೇನ್ ಖಾನ್ (45). ಸದ್ಯ ಹೈದರಾಬಾದಿನ ಹಯಾತ್ ನಗರ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಈತ ಘಾಟ್ಕೇಸರ್ ನಾರಪಲ್ಲಿ ಮೂಲದವನು. ಇದುವರೆಗೂ ಈತ 19 ಮಹಿಳೆಯರನ್ನು ಅತ್ಯಾಚಾರ ಮಾಡಿದ್ದಾನೆ. ಈತನ ವಿರುದ್ಧ ಅನೇಕ ಪ್ರಕರಣಗಳು ದಾಖಲಾದ ಬಳಿಕ ಮೇ 13ರ ಗುರುವಾರದಂದು ಪೊಲೀಸರು ಬಂಧಿಸಿ ತಮ್ಮ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ.
2020 ಮತ್ತು 2021ರಲ್ಲಿ ಹೈದರಾಬಾದ್ ನಗರದ ವಿವಿಧ ಭಾಗಗಳಲ್ಲಿ 19 ಮಹಿಳೆಯರನ್ನು ರೇಪ್ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿಂದೆಯು ಈತ ಕೆಲವು ಪ್ರಕರಣಗಳಲ್ಲಿ ಬಂಧಿಯಾಗಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾನೆ. ಮನೆಗಳಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆಯರೇ ಈತನ ಟಾರ್ಗೆಟ್. ತಮ್ಮ ಲೈಂಗಿಕ ಆಸೆಯನ್ನು ತೀರಿಸಿದರೆ ಹಣ ನೀಡುವುದಾಗಿ ಮಹಿಳೆಯರನ್ನು ಕೇಳುತ್ತಿದ್ದ. ಅಲ್ಲದೆ, ಸ್ಥಳದಲ್ಲೇ ಹಣ ನೀಡಿ ನಂಬಿಕೆ ಹುಟ್ಟಿಸುತ್ತಿದ್ದ. ಬಳಿಕ ಒಪ್ಪಿಕೊಂಡ ಮಹಿಳೆಯರನ್ನು ತನ್ನ ಸ್ಕೂಟರ್ ಮೇಲೆ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದ. ಯಾರಾದರೂ ನೋಡಿದರೆ ಲೂಟಿ ಮಾಡಬಹುದು ಎಂದು ಹೇಳಿ ಮಹಿಳೆಯರ ಬಳಿಯಿದ್ದ ಹಣ ಮತ್ತು ಆಭರಣವನ್ನು ತೆಗೆಸಿ ಸ್ಕೂಟರ್ ಡಿಕ್ಕಿಯಲ್ಲಿ ಇಡುವುದಾಗಿ ನಂಬಿಸುತ್ತಿದ್ದ. ಬಳಿಕ ಮಹಿಳೆಯರೊಂದಿಗೆ ತನ್ನ ಕಾಮದಾಸೆ ತೀರಿಸಿಕೊಂಡು ಹಣ-ಆಭರಣ ತೆಗೆದುಕೊಂಡು ಅಲ್ಲಿಂದ ಪರಾರಿ ಆಗುತ್ತಿದ್ದ.
ಹೈದರಾಬಾದ್ನ ಮೀರ್ಪೇಟ್, ಎಲ್ಬಿ ನಗರ, ಉಪ್ಪಾಲ್, ಚತ್ರಿನಕ, ಕಾಂಚನ್ಬಾಗ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಹುಸೇನ್, ಮಹಿಳೆಯರ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ಆರೋಪಿ ಬಳಿ 9 ತೊಲ ಆಭರಣಗಳು ಮತ್ತು 45 ಸಾವಿರ ರೂ. ನಗದು ಹಾಗೂ ಸ್ಕೂಟರ್ ಅನ್ನು ವಶಕ್ಕೆ ಪಡೆಯಲಾಗಿದೆ. 19 ಮಹಿಳೆಯರಲ್ಲಿ ಇಬ್ಬರು ಮಾತ್ರ ಆರೋಪಿ ವಿರುದ್ಧ ದೂರು ನೀಡಿದ್ದಾರೆ.ವಿಚಾರಣೆ ವೇಳೆ ಆಘಾತಕಾರಿ ಹೇಳಿಕೆ ನೀಡಿರುವ ಆರೋಪಿ, ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಈ ರೀತಿ ಕೃತ್ಯ ಎಸಗದಿದ್ದರೆ ನನಗೆ ಸಮಾಧಾನವೇ ಇರುವುದಿಲ್ಲ. ಇದೇ ನನ್ನ ಖುಷಿ. ಇದೆಲ್ಲವನ್ನು ನಾನು ಕಿಕ್ಗೋಸ್ಕರ ಮಾಡುತ್ತಿದ್ದೆ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಪೊಲೀಸರೇ ಒಮ್ಮೆ ಶಾಕ್ ಆಗಿದ್ದಾರೆ.
ತನ್ನ ಮಗನ ಹೆಸರಿನಲ್ಲಿ ನೋಂದಣಿ ಆಗಿರುವ ಬೈಕ್ನಲ್ಲಿ ಹುಸೇನ್ ಖಾನ್ ಓಡಾಡುತ್ತಿದ್ದ. ಫೋನ್ ಸ್ವಿಚ್ ಆಫ್ ಆದ ದಿನ ಯಾವುದೋ ಕ್ರೈಂ ನಡೆಯಲಿದೆ ಎಂದು ಕುಟುಂಬಸ್ಥರಿಗೆ ಅರ್ಥವಾಗುತ್ತಿತ್ತಂತೆ. ಇಂದು ಏನೋ ಒಂದು ನಡೆಯಲಿದೆ ಅಂದುಕೊಳ್ಳುತ್ತಿದ್ದರು. ಅಪರಾಧ ನಡೆದ ಬಳಿ ಆತ ತನ್ನ ಫೋನ್ ಅನ್ನು ಮತ್ತೆ ಆನ್ ಮಾಡುತ್ತಿದ್ದ. ಇದೀಗ ಸಿಕ್ಕಿಬಿದ್ದಿರುವ ಕಾಮುಕ ಮತ್ತೆ ಜೈಲು ಕಂಬಿ ಎಣಿಸುತ್ತಿದ್ದಾರೆ. ಇಂತವರಿಗೆ ಕಠಿ ಶಿಕ್ಷೆ ಆದಾಗಲೇ ಮತ್ತೊಬ್ಬರು ಎಚ್ಚೆತ್ತುಕೊಳ್ಳುವುದು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.