ಬೆಳಗಾವಿ, ಏಪ್ರಿಲ್ 29; ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಚುನಾವಣೋತ್ತರ ಫಲಿತಾಂಶ ಪ್ರಕಟವಾಗಿದೆ. ಏಪ್ರಿಲ್ 17ರಂದು ಮತದಾನ ನಡೆದಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಗುರುವಾರ ಟಿವಿ 9 ವಾಹಿನಿ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳ ವರದಿ ಪ್ರಕಟವಾಗಿದೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ಕೋವಿಡ್ಗೆ ಬಲಿಯಾದ ಕಾರಣ ಉಪ ಚುನಾವಣೆ ಎದುರಾಗಿದೆ.
ಬಿಜೆಪಿ ದಿ. ಸುರೇಶ್ ಅಂಗಡಿ ಪತ್ನಿ ಮಂಗಲ ಅಂಗಡಿ ಅವರಿಗೆ ಟಿಕೆಟ್ ನೀಡಿತ್ತು. ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಅವರು ಅಭ್ಯರ್ಥಿಯಾಗಿದ್ದರು. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಚುನಾವಣೆಯಿಂದ ದೂರ ಉಳಿದಿತ್ತು.
10 ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದೆ. ನೀವು ಯಾರಿಗೆ ಮತ ಹಾಕುತ್ತೀರಿ? ಎಂಬ ಪ್ರಶ್ನೆಗೆ ಬಿಜೆಪಿಗೆ ಎಂದು ಶೇ 46, ಕಾಂಗ್ರೆಸ್ಗೆ ಎಂದು ಶೇ 40, ಎಂಇಎಸ್ ಎಂದು ಶೇ 7 ಮತ್ತು ಇತರೆ ಎಂದು ಶೇ 7ರಷ್ಟು ಜನರು ಉತ್ತರ ನೀಡಿದ್ದಾರೆ.
ನಿಮಗೆ ಮೋದಿ ಸರ್ಕಾರದ ಕಾರ್ಯ ವೈಖರಿ ತೃಪ್ತಿ ತಂದಿದೆಯೇ? ಎಂದು ಪ್ರಶ್ನಿಸಲಾಗಿತ್ತು. ಹೌದು ಎಂದು ಶೇ 48, ಇಲ್ಲ ಎಂದು ಶೇ 37, ಹೇಳುವುದಕ್ಕೆ ಆಗಲ್ಲ ಎಂದು ಶೇ 15ರಷ್ಟು ಜನರು ಉತ್ತರ ನೀಡಿದ್ದಾರೆ.
ಈ ಉಪ ಚುನಾವಣೆಯಲ್ಲಿ ಸಿಡಿ ಪ್ರಕರಣ ಯಾವ ಪಕ್ಷಕ್ಕೆ ಹೆಚ್ಚು ಹೊಡೆತ ಕೊಟ್ಟಿದೆ? ಎಂದು ಪ್ರಶ್ನಿಸಲಾಗಿತ್ತು. ಬಿಜೆಪಿಗೆ ಎಂದು ಶೇ 63ರಷ್ಟು ಜನರು, ಕಾಂಗ್ರೆಸ್ಗೆ ಎಂದು ಶೇ 18ರಷ್ಟು ಜನರು, ಇತರೆ ಎಂದು ಶೇ 19ರಷ್ಟು ಜನರು ಉತ್ತರ ನಿಡಿದ್ದಾರೆ.