ಬೆಂಗಳೂರು, ಮಾ.24: ರಾಜ್ಯ ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಟೋಲ್ ಶುಲ್ಕ ಸಂಗ್ರಹ ಹಾಗೂ ಟೋಲ್ಗಳಲ್ಲಿ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ತಪ್ಪಿಸುವ ಸಂಬಂಧ ಪರಿಶೀಲಿಸಿ ಮುಂದಿನ ನಿರ್ಧಾರಕ್ಕೆ ಬರಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳಗಾವಿಯ ಬಾಗವಾಡಿ ಟೋಲ್ನಲ್ಲಿ ರೈತರಿಗೆ ಸಮಸ್ಯೆ ಆಗುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಅಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಪರಿಶೀಲನೆ ನಡೆಸಲಾಗುವುದು. ಅವೈಜ್ಞಾನಿಕ ಟೋಲ್ ಶುಲ್ಕ ಸಂಗ್ರಹದ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಹೇಳಿದರು.
ಸದಸ್ಯ ಕವಟಗಿಮಠ ಅವರು ಮಾತನಾಡಿ, ಟೋಲ್ಗಳಲ್ಲಿ ಇನ್ನು ಎಷ್ಟು ವರ್ಷ ಶುಲ್ಕ ಸಂಗ್ರಹಿಸಲಾಗುತ್ತದೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಾರಜೋಳ ಅವರು, ಬ್ಯಾಂಕ್ನಿಂದ ಸಾಲ ತೆಗೆದುಕೊಂಡು ರಸ್ತೆ ನಿರ್ಮಾಣ ಮಾಡಲಾಗಿದೆ. ಆ ಸಾಲ ಮರುಪಾವತಿ ಆಗುವವರೆಗೂ ಶುಲ್ಕ ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.
ಕವಟಗಿಮಠ ಅವರು, ಹಾಗಾದರೆ ಸಾಲ ಮರುಪಾವತಿಸಲು ಇನ್ನೆಷ್ಟು ವರ್ಷ ಬೇಕು. ಇನ್ನು 30 ವರ್ಷ ಬೇಕಾಗಬಹುದಾ? ಎಂದರು. ಮಧ್ಯಪ್ರವೇಶಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಈ ಕುರಿತು ಬಹಳಷ್ಟು ಚರ್ಚೆ ನಡೆಯಬೇಕಾಗಿದ್ದು, ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಸಭಾಧ್ಯಕ್ಷರು ಅರ್ಧ ಗಂಟೆಗೆ ಅವಕಾಶ ನೀಡಿ ಮುಂದಿನ ಪ್ರಶ್ನೆಯನ್ನು ತೆಗೆದುಕೊಂಡರು.