Breaking News

(ಬಿಜೆಪಿ) ಕೈಯಲ್ಲಿ ರಾಜ್ಯ ಸುರಕ್ಷಿತವಾಗಿರುವುದಿಲ್ಲ ಮತ್ತು ಆರ್ಥಿಕವಾಗಿ ದಿವಾಳಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ: ಸಿದ್ದರಾಮಯ್ಯ

Spread the love

ಬೆಂಗಳೂರು: ಇವರ (ಬಿಜೆಪಿ) ಕೈಯಲ್ಲಿ ರಾಜ್ಯ ಸುರಕ್ಷಿತವಾಗಿರುವುದಿಲ್ಲ ಮತ್ತು ಆರ್ಥಿಕವಾಗಿ ದಿವಾಳಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಉತ್ತರಕ್ಕೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ‘ಇವರು ತುಪ್ಪನಾದ್ರೂ ತಿನ್ನಲಿ, ಬೆಣ್ಣೆನಾದ್ರೂ ತಿನ್ನಲಿ. ಅಂಕಿ-ಅಂಶ ನೋಡಿದರೆ ಗೊತ್ತಾಗುವುದಿಲ್ಲವೆ’ ಎಂದು ಪ್ರಶ್ನಿಸಿದರು.

‘ಬಜೆಟ್‌ ಮೇಲಿನ ನಮ್ಮ ಪ್ರಶ್ನೆಗಳಿಗೆ ಯಡಿಯೂರಪ್ಪ ಅವರು ತರಾತುರಿಯಲ್ಲಿ 24 ಪುಟಗಳ ಉತ್ತರ ಓದಿರುವುದು ಸಂತೆಯಲ್ಲಿ ಮಾನ ಉಳಿಸಿಕೊಳ್ಳಲು ಸೊಪ್ಪು-ಸದೆಗಳನ್ನು ಮೈಗೆ ಕಟ್ಟಿಕೊಂಡಂತಿದೆ. ನಮ್ಮ ಅನೇಕ ಪ್ರಶ್ನೆಗಳಿಗೆ ಮುಖ್ಯಮಂತ್ರಿಯವರು ಉತ್ತರವನ್ನೇ ನೀಡಿಲ್ಲ’ ಎಂದರು.

‘ಸಾಲ ಸಿಗುತ್ತದೆ ಎಂದು ಸಾಲ ತಂದರೆ ಆಗುವುದಿಲ್ಲ. ಸಾಲ ತೀರಿಸುವ ಶಕ್ತಿ ಇದೆಯಾ ಎಂಬುದನ್ನು ನೋಡಿಕೊಂಡು ಸಾಲ ಮಾಡಬೇಕು’ ಎಂದರು.

ರಾಜಸ್ವ ವೆಚ್ಚ ಮತ್ತು ಬದ್ಧತಾ ವೆಚ್ಚ ಕಡಿಮೆ ಮಾಡುವ ಬಗ್ಗೆ ಗಂಭೀರವಾದ ಆಲೋಚನೆಗಳೇ ಇಲ್ಲ. 2022 ರ ಜೂನ್‌ನಿಂದ ಕೇಂದ್ರದಿಂದ ಬರುವ ಜಿಎಸ್‌ಟಿ ಪರಿಹಾರದ ಮೊತ್ತವೂ ನಿಂತು ಹೋಗುತ್ತದೆ. ಇದರಿಂದ ನಮ್ಮ ಮೇಲೆ ಇನ್ನಷ್ಟು ಹೊರೆ ಆಗುತ್ತದೆ. ಕೇಂದ್ರ ಸರ್ಕಾರ ಅನುದಾನವನ್ನೂ ಕಡಿತ ಮಾಡಿದೆ. ಅದನ್ನು ತರುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ರಾಜ್ಯದಿಂದ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ₹2.50 ಲಕ್ಷ ಕೋಟಿ ಹೋಗುತ್ತದೆ. ಆದರೆ ನಮಗೆ ವಾಪಸ್‌ ಸಿಗುವುದು ₹30 ಸಾವಿರ ಕೋಟಿ ಮಾತ್ರ. ವಾಸ್ತವದಲ್ಲಿ ₹74 ಸಾವಿರ ಕೋಟಿ ಸಿಗಬೇಕು. ರಾಜ್ಯಕ್ಕೆ ನ್ಯಾಯಬದ್ಧವಾಗಿ ಬರಬೇಕಾದ ಹಣವನ್ನು ಪಡೆಯಲು ಇವರು ಪ್ರಯತ್ನಿಸುತ್ತಿಲ್ಲ ಎಂದರು.


Spread the love

About Laxminews 24x7

Check Also

ಸನ್ನಡತೆ ಆಧಾರದ ಮೇಲೆ ರಾಜ್ಯದ 9 ಜೈಲಿನಿಂದ 31 ಕೈದಿಗಳ ಬಿಡುಗಡೆ

Spread the loveಬೆಂಗಳೂರು: ರಾಜ್ಯದ ವಿವಿಧ ಜೈಲಿನಿಂದ ಸನ್ನಡತೆ ಆಧಾರದ ಮೇಲೆ 31 ಕೈದಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ