ಬೆಳಗಾವಿ: ಬೆಳಗಾವಿ ಗಡಿ ವಿಷಯದಲ್ಲಿ ಕರ್ನಾಟಕ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ. ಈ ನೆಲ, ಈ ಜಲವನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಣೆ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ರಕ್ಷಣೆ ಮಾಡುತ್ತದೆ. ಶಿವಸೇನೆ ಪುಂಡಾಟಿಕೆ ನಿಲ್ಲಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಶಿವಸೇನೆ ಪುಂಡಾಟಿಕೆ ನಿರಂತರವಾಗಿ ನಡೆಯುತ್ತಿದೆ. ಕಠಿಣ ಕ್ರಮ ಜರುಗಿಸಿ ನಾವು ನಿಲ್ಲಿಸಬೇಕಿದೆ ಎಂದರು.
ಪೊಲೀಸ್ ಅಧಿಕಾರಿ, ಜಿಲ್ಲಾಧಿಕಾರಿಗೆ ಇಂಥವರನ್ನು ಮಟ್ಟ ಹಾಕಲು ನಾನು ಸೂಚನೆ ಕೊಡುತ್ತೇನೆ. ಬಹಳಷ್ಟು ಜನ ಮರಾಠಿಗರು ಇದ್ದಾರೆ ಅವರು ಶಾಂತಿ ಬಯಸುತ್ತಾರೆ. ಶಿವಸೇನೆ ಕಾರ್ಯಕರ್ತರಿಗೆ ಸರ್ಕಾರ ಸರಿಯಾದ ಪಾಠ ಕಲಿಸಲಿದೆ. ಶಿವಸೇನೆಯವರಿಗೆ ಎಬಿಸಿಡಿಯಿಂದ ಹಿಡಿದು ಕನ್ನಡದ ಅಕ್ಷರ ಮಾಲೆಗಳನ್ನು ಕಲಿಸುತ್ತೇವೆ ಎಂದರು.
ಶಿವಸೇನೆ ಕರ್ನಾಟಕದಲ್ಲಿ ಬ್ಯಾನ್ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಶಿವಸೇನೆ ಅದೊಂದು ರಾಜಕೀಯ ಪಕ್ಷ. ಅದನ್ನ ಬ್ಯಾನ್ ಮಾಡಲು ಅವಕಾಶ ಇದೆಯೋ ಇಲ್ಲವೋ ಗೊತ್ತಿಲ್ಲ. ಅದರ ಬಗ್ಗೆ ನಾನು ನೋಡುವೆ ಎಂದು ಹೇಳಿದರು.
ಬೆಳಗಾವಿ ಲೋಕಸಭೆ ಉಪ ಚುನಾವಣೆ ವಿಚಾರ, ನಿನ್ನೆ ಅರುಣಸಿಂಗ್ ಬಂದಿದ್ದರು. ಚುನಾವಣೆಯ ಕಮಿಟಿಯಲ್ಲಿ ನಾನು ಇರುವೆ. ನನಗೆ ತಿಳಿದಿರುವಂತೆ ಅಭ್ಯರ್ಥಿ ಯಾರಾಗಬೇಕೆಂದು ಅವರಿಗೆ ತಿಳಿಸಿರುವೆ. ಬೆಳಗಾವಿ ಲೋಕಸಭೆ ಅಭ್ಯರ್ಥಿ ಬಗ್ಗೆ ಅರುಣ ಸಿಂಗ್ ಜೊತೆಗೆ ನಾನು ಒನ್ ಟು ಒನ್ ಮಾತಾಡಿ ಹೇಳಿರುವೆ. ಬೆಳಗಾವಿ ಲೋಕಸಭೆಗೆ ನನ್ನ ದೃಷ್ಟಿಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು ಅಂತ ಹೇಳಿರುವೆ. ಉಳಿದಂತೆ ಬಿಜೆಪಿ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು
ಟಿಕೆಟ್ ರೇಸ್ ನಲ್ಲಿ ಸುರೇಶ ಅಂಗಡಿ ಕುಟುಂಬದ ಸೇರಿ ಬಹಳ ಜನರು ಇದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಒತ್ತು ಕೊಡುತ್ತೇವೆ. ಅದೇ ರೀತಿ ಅಂಗಡಿಯವರ ಕುಟುಂಬ ಪಕ್ಷದೊಂದಿಗೆ ತುಂಬಾ ಒಡನಾಟವಿದೆ. ಈ ವಿಚಾರವನ್ನು ಪಕ್ಷದ ಗಮನಕ್ಕೆ ತಂದಿರುವೆ. ಕೋರ್ ಕಮಿಟಿ ಮೀಟಿಂಗ್ ನಲ್ಲಿ 3 ಜನ ಗೆಲ್ಲುವಂತಹ ಅಭ್ಯರ್ಥಿಗಳ ಹೆಸರನ್ನು ಪಕ್ಷದ ಹೈಕಮಾಂಡ್ ಗೆ ಕಳುಹಿಸಿರುವೆ. ನನ್ನ ಹೆಸರುಗಳನ್ನು ಅರುಣ್ ಸಿಂಗ್ ಅವರಿಗೆ ಕೊಟ್ಟಿರುವೆ. ಪಕ್ಷದ ಹೈಕಮಾಂಡ್ ಯಾರಿಗೆ ಕೊಟ್ಟರೂ ನಮ್ಮ ಒಪ್ಪಿಗೆ ಇದೆ ಅಂತ ಹೇಳಿರುವೆ ಎಂದರು.