ಬೆಂಗಳೂರು: ಮೈಸೂರು ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಗಿನ ಮೈತ್ರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಇಬ್ಬರು ಪ್ರಮುಖ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ತಾರಕಕ್ಕೇರಿದೆ. ಪ್ರಕರಣವನ್ನು ಕೆಪಿಸಿಸಿ ಶಿಸ್ತು ಸಮಿತಿಗೆ ವಹಿಸುವುದರೊಂದಿಗೆ ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್ ಮುಂದಾಗಿದೆ.
ಶಿಸ್ತು ಸಮಿತಿ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ಅವರು ಮಾಜಿ ಸಚಿವ ತನ್ವೀರ್ ಸೇಠ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಮೈಸೂರು ಪ್ರಕರಣದ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಮಟ್ಟದಲ್ಲಿ ಮನವೊಲಿಸಿ ಎಐಸಿಸಿಯಿಂದ ನೋಟಿಸ್ ಕೊಡಿಸುವಂತೆ ಮಾಡಿದ್ದಾರೆ, ಶಿಸ್ತು ಸಮಿತಿಗೆ ವಹಿಸುವಂತೆ ನೋಡಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಬುಧವಾರ ದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್ ಆಯೋಜಿಸಿರುವ ಜನಧ್ವನಿ ಯಾತ್ರೆ ಆರಂಭವಾಗಲಿದ್ದು, ಇದರ ಮುನ್ನಾ ದಿನವೇ ನಡೆದ ಬೆಳವಣಿಗೆಗಳು ಪಕ್ಷದಲ್ಲಿ ಗೊಂದಲ ಮೂಡಿಸಿವೆ.
ಈ ಮಧ್ಯೆ ತನ್ವೀರ್ ಸೇಠ್ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಲಿಖೀತ ವಿವರಣೆ ನೀಡಿದ್ದಾರೆ. ಇದರ ಜತೆಗೆ ಪ್ರಕರಣದ ಬಗ್ಗೆ ವಾಸ್ತವ ಮಾಹಿತಿ ಸಂಗ್ರಹಿಸಲು ಹೈಕಮಾಂಡ್ನಿಂದ ನಿಯೋಜನೆಯಾಗಿದ್ದ ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿ ಗೌಡ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ ಮೈಸೂರಿನತ್ತ ತೆರಳಿದ್ದಾರೆ. ಬುಧವಾರ ಪಾಲಿಕೆ ಸದಸ್ಯರಿಂದ ಮಾಹಿತಿ ಪಡೆಯಲಿದ್ದಾರೆ.
ಮಂಗಳವಾರ ಮಧು ಯಕ್ಷಿ ಗೌಡ ಭೇಟಿ ಸಂದರ್ಭ ದಲ್ಲಿಯೂ ಸಿದ್ದರಾಮಯ್ಯ ಅವರು ತಮಗೆ ಹಿನ್ನಡೆ ಉಂಟು ಮಾಡುವ ಉದ್ದೇಶದಿಂದಲೇ ಮೈತ್ರಿ ಮಾಡಿ ಕೊಳ್ಳಲಾಗಿದೆ, ಇದರಿಂದ ಬೇಸರವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಮೈಸೂರು ಪಾಲಿಕೆ ವಿಚಾರದಲ್ಲಿ ತನ್ನ ಪಾತ್ರವೇನೂ ಇಲ್ಲ. ತಾನೂ ಸಿದ್ದರಾಮಯ್ಯ ಅವರೂ ಮೇಯರ್ ಸ್ಥಾನ ಪಡೆಯಲು ಹೇಳಿದ್ದೆವು, ಸ್ಥಳೀಯವಾಗಿಯೇ ತೀರ್ಮಾನ ಮಾಡಿಕೊಂಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಅವರು ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ದೂರ ಇರಿಸಿದ್ದಕ್ಕೆ ಬಹುಮಾನ!
ಡಿ.ಕೆ. ಶಿವಕುಮಾರ್ ಭೇಟಿ ಅನಂತರ ಸುದ್ದಿ ಗಾರರ ಜತೆ ಮಾತನಾಡಿದ ತನ್ವೀರ್ ಸೇs., “ಬಿಜೆಪಿ ಯನ್ನು ಅಧಿಕಾರದಿಂದ ದೂರ ಇರಿಸಿದ್ದಕ್ಕೆ ಸಿಕ್ಕಿರುವ ಬಹುಮಾನ’ ಎಂದು ನಗುತ್ತಲೇ ಚಟಾಕಿ ಹಾರಿ ಸಿದರು. “ಪಕ್ಷ ನನ್ನ ಜತೆ ನಿಲ್ಲುವ ಭರವಸೆ ಇದೆ. ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಸಮರ್ಥಿಸಿಕೊಂಡರು.
ಶಿಸ್ತು ಸಮಿತಿ ಅಧ್ಯಕ್ಷರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, ಅವರು ಕೇಳಿರುವ ಅಂಶಗಳಿಗೆ ಉತ್ತರ ಕೊಡುವ ಜತೆಗೆ ಇನ್ನಷ್ಟು ವಿವರಗಳು, ಮೈತ್ರಿಯ ಸನ್ನಿವೇಶಗಳು, ಮೈತ್ರಿಯ ಫಲ ಮತ್ತು ನಷ್ಟದ ವಿಚಾರದ ಬಗ್ಗೆ ಸಮಗ್ರ ವರದಿ ಕೊಟ್ಟಿದ್ದೇನೆ. ಮತ್ತಷ್ಟು ಮಾಹಿತಿ ಕೇಳಿದರೂ ಕೊಡುತ್ತೇನೆ ಎಂದರು.
ಸಿದ್ದು ಗೈರು, ಡಿಕೆಶಿ ದೌಡು
ಬೆಂಗಳೂರಿನಲ್ಲಿ ಮಂಗಳವಾರ ಮಹಿಳಾ ಕಾಂಗ್ರೆಸ್ ವತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಸಿದ್ದರಾಮಯ್ಯ ಗೈರು ಹಾಜರಾಗಿದ್ದರು. ಬುಧ ವಾರದ ಜನಧ್ವನಿ ಯಾತ್ರೆಗೂ ಅವರು ಗೈರು ಆಗ ಬಹುದು ಎಂಬ ವದಂತಿಗಳ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಸಂಜೆ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಜನಧ್ವನಿ ಯಾತ್ರೆ ಯಶಸ್ವಿಗೊಳಿಸುವ ಕುರಿತು ಸಮಾ ಲೋಚನೆ ನಡೆಸಿ, ಆಹ್ವಾನ ನೀಡಿದರು. ಮಾಜಿ ಸಚಿವರಾದ ಜಮೀರ್ ಅಹಮದ್, ನಸೀರ್ ಅಹಮದ್, ಚೆಲುವರಾಯ ಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.