ಘಟಪ್ರಭಾ: ಶ್ರೀ ದುರದುಂಡೇಶ್ವರ ಪುಣ್ಯಾರಣ್ಯ ಪ್ರೌಢಶಾಲೆಯು ಬಡ ವಿದ್ಯಾರ್ಥಿಗಳ ಪಾಲಿನ ವಿದ್ಯಾ ಕಾಶಿಯಾಗಿದೆ. ಅಕ್ಷರ ಕಲಿಸಿದ ಗುರುವಿನ ಋಣ ತೀರಿಸಿದರೇ ಸಾಲದು. ಪಂಚಋಣ ತೀರಿಸಿದವನೇ ನಿಜವಾದ ಶಿಷ್ಯನ ಕೊಡುಗೆ ಎಂದು ನಿವೃತ್ತ ಶಿಕ್ಷಕ ಎಸ್. ಐ. ಬೆನವಾಡಿ ಹೇಳಿದರು.
ರವಿವಾರದಂದು ಅವರು ಸಮೀಪದ ಅರಭಾವಿಮಠದಲ್ಲಿ ಪ್ರಥಮ ಬಾರಿಗೆ ಜರುಗಿದ ಶ್ರೀ ದುರದುಂಡೇಶ್ವರ ಪುಣ್ಯಾರಣ್ಯ ಪ್ರೌಢಶಾಲೆಯ 1980-81ನೇ ಶೈಕ್ಷಣಿಕ ವರ್ಷದ 10ನೇ ತರಗತಿಯ ವಿದ್ಯಾರ್ಥಿಗಳಿಂದ “ಗುರುವಂದನೆ ಹಾಗೂ ಪುನರ್ಮಿಲನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಂದೆ-ತಾಯಿ, ಗುರು, ಭೂಮಿ, ಸಮಾಜ, ಮತ್ತು ನಿಸರ್ಗ ಈ ಪಂಚಋಣ ತೀರಿಸಬೇಕು. ಅಧಿಕಾರಿಯಾಗಿರಲಿ ನಮಗೆ ಜನ್ಮ ನೀಡಿದ ತಂದೆತಾಯಿಯನ್ನು ವೃದ್ಧಾಶ್ರಮದಲ್ಲಿ ಇಟ್ಟರೇ ನಮಗೆ ಪುಣ್ಯ ಬರುವುದಿಲ್ಲ. ಆದ್ದರಿಂದ ಅವರೊಂದಿಗೆ ಒಟ್ಟಾಗಿ ಬಾಳಿದರೇ ಮಾತ್ರ ನಮ್ಮ ಜನ್ಮ ಸಾರ್ಥಕತೆಯಾಗುತ್ತದೆ. ಅಕ್ಷರ ಕಲಿಸಿದ ಗುರುವಿಗೆ ಸನ್ಮಾನ,ಸತ್ಕಾರ, ಗೌರವ ನೀಡದಾಗ ಮಾತ್ರ ಗುರುವಿನ ಋಣ ಮುಟ್ಟುತ್ತದೆ. ಸಮಾಜದಲ್ಲಿ ಒಳ್ಳೇಯ ಪ್ರಜೆಯಾಗಿ ಬಾಳಬೇಕು. ನಮಗೆ ಅನ್ನ ನೀಡುವ ಭೂಮಿ ತಾಯಿಯ ಋಣ ಮತ್ತು ನಿಸರ್ಗದ ಗಾಳಿ, ನೀರು, ಉತ್ತಮ ಪರಿಸರದ ಋಣ ಮುಟ್ಟಿಸುವಂತಹ ಉತ್ತಮ ನಾಗರೀಕನಾಗಿ ನಮ್ಮ ಕರ್ತವ್ಯ ಮಾಡಿದಾಗ ಮಾತ್ರ ನಮ್ಮ ಜೀವನ ಸುಖಮಯವಾಗುತ್ತದೆ ಎಂದರು. ಶ್ರೀ ದುರದುಂಡೇಶ್ವರ ಮಠವು ಪುಣ್ಯ ಕ್ಷೇತ್ರವಾಗಿದ್ದು ಬಡಜನರ ಪಾಲಿನ ಮಕ್ಕಳಿಗೆ ಶೈಕ್ಷಣಿಕ,ವಸತಿ ಮತ್ತು ದಾಸೋಹ ಕ್ಷೇತ್ರವಾಗಿದೆ. ಸನ್ 1968ರಲ್ಲಿ ಶ್ರೀ ಬಸವ ವಸತಿ ಉಚಿತ ಹಾಸ್ಟೆಲ್ ಪ್ರಾರಂಭಗೊಂಡಿದ್ದು ಸುಮಾರು 4 ನೂರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕ ವೃಂದದವರು ಕೂಡಾ ವಾಸ್ತವ್ಯ ಮಾಡುತ್ತಿದ್ದರು. ಕಡಿಮೆ ವೇತನದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದರು. ಕಷ್ಟದ ಜೀವನದಲ್ಲಿ ಕಲಿತ ವಿದ್ಯಾರ್ಥಿಗಳು ಇಂದಿಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಉತ್ತಮ ಜೀವನ ನಡೆಸುತ್ತಿರುವುದು ಸಂತೋಷದಾಯಕವಾಗಿದೆ. ಪ್ರತಿ ವರ್ಷವೂ ಈ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದರು. ಶಾಲಾ ಪ್ರಾರಂಭದಿಂದಲೂ ಎಸ್ಎಸ್ಎಲ್ಸಿ ಪರೀಕ್ಷೆಯ ಸೆಂಟರ್ ಮೊದಲು ಪ್ರಾರಂಭ ಮಾಡಿದ್ದು ಇನ್ನೂವರೆಗೂ ಇಲ್ಲಿಯೇ ಉಳಿದಿದೆ. ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು. ಕಳೆದ ನಲವತ್ತು ವರ್ಷಗಳ ಹಿಂದೆ ಕಲಿತ ವಿದ್ಯಾರ್ಥಿಗಳನ್ನು ನೋಡಿ ನನಗೆ ತುಂಬಾ ಆನಂದವಾಯಿತು ಎಂದರಲ್ಲದೇ ಈ ವಿದ್ಯಾರ್ಥಿಗಳನ್ನು ನನ್ನ ಆತ್ಮೀಯ ಮಿತ್ರರೆಂದು ಭಾವಿಸುತ್ತೇನೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ದುರದುಂಡೇಶ್ವರ ಸಿದ್ಧ ಸಂಸ್ಥಾನಮಠದ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ ವಹಿಸಿದ್ದರು.
ಹಳೆಯ ವಿದ್ಯಾರ್ಥಿಗಳಾದ ಬಾಳೇಶ ಹೂಗಾರ, ಮಾವುತ, ಶೀರಹಟ್ಟಿ, ವಡೇಯರ, ಕೊಳವಿ, ತಮ್ಮ ವಿದ್ಯಾರ್ಥಿ ಜೀವನದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆ ಮೇಲೆ ವಿದ್ಯಾದಾನ ಮಾಡಿದ ಶಿಕ್ಷಕರುಗಳಾದ ಎಸ್.ಆರ್.ಕುಲಕರ್ಣಿ, ಎಸ್.ಎ.ಆರಾದ್ರಿಮಠ, ಕೆ.ವಾಯ್.ಕುಳ್ಳೂರು, ಸಿ.ಎಚ್.ಪಾಟೀಲ, ವಿ.ಎಸ್.ಕಾಜಗಾರ, ಜಿ.ಎ.ಪತ್ತಾರ, ಎಚ್.ಎಸ್.ಕತ್ತಿಶೆಟ್ಟಿ, ಬಿ.ಆರ್.ಕಾರಗಿ, ಶಿಕ್ಷಕೇತರ ಸಿಬ್ಬಂದಿಗಳಾದ ಎಂ.ವಿ.ಹಿರೇಮಠ, ಬಿ.ಆರ್.ಕುಲಕರ್ಣಿ, ಬಿ.ಬಿ.ಚಂಡವ್ವಗೋಳ, ಡಿ.ಎ.ಹಿರೇಮಠ, ಯರಗಟ್ಟಿಯ ರತ್ನ ಸಂಗಮ ಪ್ಯಾರಾಡೈಸ್ ಮಾಲಿಕರು ಹಾಗೂ ಸಮಿತಿಯ ಅಧ್ಯಕ್ಷ ಸಂಗನಗೌಡ ದ್ಯಾಮನಗೌಡರ ಉಪಸ್ಥಿತರಿದ್ದು ಅವರನ್ನು ಹಳೆಯ ವಿದ್ಯಾರ್ಥಿಗಳ ಪರವಾಗಿ ಸನ್ಮಾನಿಸಲಾಯಿತು.
ಹಳೆಯ ವಿದ್ಯಾರ್ಥಿ ಹಾಗೂ ಶ್ರೀ ರಾಚಯ್ಯಸ್ವಾಮಿ ಡಿ.ಹಿರೇಮಠ ಪೌಂಡೇಶನ್ ಅಧ್ಯಕ್ಷ ಶ್ರೀಕಾಂತ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಗಲಿದ ಶಿಕ್ಷಕರಿಗೆ ಮೌನಾಚರಣೆ ಮಾಡಲಾಯಿತು.