ಬೆಳಗಾವಿ ಗಡಿಯಲ್ಲಿ ಶಿವಸೇನೆ ಪುಂಡಾಟ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಬೆಳಗಾವಿ ಚಲೋ ಕರೆ ನೀಡಿದ್ದು, ನಾನಾ ಜಿಲ್ಲೆಗಳಿಂದ 30 ವಾಹನಗಳಲ್ಲಿ ಬೆಳಗಾವಿಗೆ ಬಂದಿದ್ದಾರೆ. ಬೆಳಗಾವಿ ಹಿರೇಬಾಗೇವಾಡಿ ಟೋಲ್ ಗೇಟ್ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಗಾರರನ್ನ ಪೆÇಲೀಸರು ತಡೆದಿದ್ದಾರೆ.
ಗಡಿಯಲ್ಲಿ ಭಗವಾ ಧ್ವಜ ಹಿಡಿದು ಬೆಳಗಾವಿಯತ್ತ ಹೊರಟಿದ್ದ ಶಿವಸೇನೆ ಕಾರ್ಯಕರ್ತರ ಪುಂಡಾಟ, ಪೊಲೀಸರೊಂದಿಗೆ ನೂಕಾಟ ತಳ್ಳಾಟ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಬೆಳಗಾವಿ ಚಲೋ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ನೂರಾರು ಕರ್ನಾಟಕ ರಕ್ಷಣಾ ವೇದಿಕೆಯ ಯುವಸೇನೆ ಕಾರ್ಯಕರ್ತರು ಬೆಳಗಾವಿಗೆ ಹೊರಟಿದ್ದಾರೆ. ಬೆಳಗಾವಿ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಬಂದಿರುವ ಹೋರಾಟಗಾರರನ್ನು ಪೊಲೀಸರು ತಡೆದು ನಿಲ್ಲಿಸಿದರು. ಹೋರಾಟಗಾರರು ನಮ್ಮದು ನಮ್ಮದು, ಬೆಳಗಾವಿ ನಮ್ಮದು ಘೋಷಣೆ ಕೂಗಿದರು. ಟೋಲ್ ಗೇಟ್ ಬಳಿಯೇ ಉರುಳು ಸೇವೆ ಮಾಡಿದರು.
ಪಾದಯಾತ್ರೆ ಮೂಲಕ ಬೆಳಗಾವಿಯತ್ತ ಹೊರಟ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಗಾರರು ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಶಿವಸೇನೆ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಆದರೆ ಗಲಾಟೆ ಹೆಚ್ಚಿದರೆ ಚನ್ನಮ್ಮ ವೃತ್ತದಲ್ಲಿ ಕಾರ್ಯಕರ್ತರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಪೊಲೀಸ್ ಪಡೆ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮನವೊಲಿಸುವ ಕಾರ್ಯ ಮುಂದುವರಿದಿದೆ.