ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಬಿಎನ್ಎಸ್ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇಂದಿರಾನಗರ ಕ್ಲಬ್ ನಲ್ಲಿ ನಿಯಮ ಉಲ್ಲಂಘನೆ ಮಾಡಿ ಹಣವನ್ನು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಕ್ಲಬ್ ಸದಸ್ಯ ರಾಮ್ ಮೋಹನ್ ಕೋರ್ಟ್ಗೆ ದೂರು ನೀಡಿದ್ದರು.ಕೋರ್ಟ್ ನಿರ್ದೇಶನದಂತೆ ಈಗ ಬಿಎನ್ಎಸ್ ರೆಡ್ಡಿ ಮತ್ತು ನಾಗೇಂದ್ರ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 120 ,418, 465, 471, 420,468, 417ರ ಅಡಿ ಪ್ರಕರಣ ದಾಖಲಾಗಿದೆ.ದೂರಿನಲ್ಲಿ ಏನಿದೆ?
13 ಮಂದಿ ಸದಸ್ಯರು ಇರುವ ಇಂದಿರಾನಗರ ಕ್ಲಬ್ನಲ್ಲಿ ಬಿಎನ್ಎಸ್ ರೆಡ್ಡಿ ಅಧ್ಯಕ್ಷರಾಗಿದ್ದಾರೆ. ಕ್ಲಬ್ನಲ್ಲಿ ಬಿಎನ್ಎಸ್ ರೆಡ್ಡಿ ಮತ್ತು ನಾಗೇಂದ್ರ ಪ್ರಭಾವಿಗಳಾಗಿದ್ದು ಹಣವನ್ನು ಕಾನೂನು ಬಾಹಿರವಾಗಿ ದುರುಪಯೋಗ ಮಾಡಿದ್ದಾರೆ. ಇದರಿಂದಾಗಿ ಕ್ಲಬ್ಗೆ ಮತ್ತು ಸದಸ್ಯರಿಗೆ ನಷ್ಟ ಉಂಟಾಗಿದೆ.
ಕ್ಲಬ್ಗೆ ಸಂಬಂಧಿಸಿ ಬ್ಯಾಂಕ್ ಖಾತೆಗಳನ್ನು ವ್ಯವಸ್ಥಾಪಕ ಸಮಿತಿಯಿಂದ ನಿರ್ಣಯ ಕೈಗೊಂಡು ಆ ನಿರ್ಣಯ ಪತ್ರಕ್ಕೆ ಸದಸ್ಯರ ಸಹಿಯನ್ನು ನಕಲು ಮಾಡಿದ್ದಾರೆ. ಈ ಫೆಬ್ರವರಿಯಲ್ಲಿ ಉಪಾಧ್ಯಕ್ಷರಾದ ಮುನಿಸ್ವಾಮಿ, ಖಜಾಂಚಿಯಾದ ನಾರಾಯಣ ಮತ್ತು ರಾಜಕುಮಾರ್ ಸೇರಿದಂತೆ ಸಂಸ್ಥೆ ಸದಸ್ಯರ ಮೇಲೆ ಸುಳ್ಳು ಆರೋಪ ಮಾಡಿ ಅಮಾನತು ಮಾಡಿದ್ದಾರೆ. ಅಮಾನತು ಮತ್ತು ಅಕ್ರಮ ಎಸಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾರೆ.