ಬಾಗಲಕೋಟೆ: ಕೋವಿಡ್ ಅನ್ಲಾಕ್ ಆರಂಭವಾದ ಬಳಿಕ ಮಾಸ್ಕ್ ಹಾಕಿಕೊಳ್ಳದೆ ಬೇಜವಾಬ್ದಾರಿಯಿಂದ ಓಡಾಡುವವರಿಗೆ ಬಾಗಲಕೋಟೆ ಜಿಲ್ಲೆಯಲ್ಲಿ ಪೊಲೀಸರು ದಂಡದ ಬಿಸಿ ಮುಟ್ಟಿಸಿದರೂ ಇನ್ನೂ ಜನ ಬುದ್ಧಿ ಕಲಿಯುತ್ತಿಲ್ಲ. ಆರಂಭದ ಅನ್ಲಾಕ್ನಿಂದ ಸೆಪ್ಟೆಂಬರ್ ಮಾಸಾಂತ್ಯದವರೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾಸ್ಕ್ ಧರಿಸದವರಿಗೆ ಬರೋಬ್ಬರಿ 23.55 ಲಕ್ಷ ದಂಡ ವಿಧಿಸಿದ್ದಾರೆ. ಆದರೂ ಜನರು ಇನ್ನೂ ಮಾಸ್ಕ್ ಹಾಕಿಕೊಳ್ಳದೆ ಕೊರೋನಾ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ನಿತ್ಯ ನೂರಾರು ಹೊಸ ಕೇಸ್ಗಳು ಪತ್ತೆಯಾಗುತ್ತಿವೆ.
ಬಾಗಲಕೋಟೆ ಜಿಲ್ಲೆಯಲ್ಲಿ ಈವರೆಗೆ 10,491 ಕೊರೋನಾ ಸೋಂಕಿತರ ಸಂಖ್ಯೆ ಕಂಡುಬಂದಿದೆ. ಅಕ್ಟೋಬರ್ 1ರಂದೇ ತಿಂಗಳಾರಂಭದಲ್ಲಿ 254 ಹೊಸ ಕೇಸ್ಗಳು ಪತ್ತೆಯಾಗಿವೆ. 1,030 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 107 ಜನ ಕೊರೋನಾಗೆ ಬಲಿಯಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 10,7336 ಕೊರೋನಾ ಪರೀಕ್ಷೆ ಮಾಡಲಾಗಿದ್ದು, 94,774 ವರದಿ ನೆಗಟಿವ್ ಬಂದಿವೆ. ಇನ್ನು, 1,560 ವರದಿ ಫಲಿತಾಂಶ ಬರಬೇಕಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಇಷ್ಟೆಲ್ಲ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಜನ ಮಾತ್ರ ಕೊರೋನಾ ವೈರಸ್ ಭಯವಿಲ್ಲದೇ ಓಡಾಡುತ್ತಿದ್ದಾರೆ. ಕೊರೋನಾ ವೈರಸ್ ಸಾಮಾನ್ಯವಾಗಿಬಿಟ್ಟಿದೆ, ಅದರಿಂದ ಏನೂ ಆಗುವುದಿಲ್ಲ ಎನ್ನುವ ಮನಸ್ಥಿತಿಗೆ ಜನ ಬಂದುಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮಾರುಕಟ್ಟೆ, ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಬೇಜವಾಬ್ದಾರಿ ತೋರುತಿದ್ದಾರೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಈಗಾಗಲೇ ದಂಡಂ ದಶಗುಣಂ ಎನ್ನುವಂತೆ ಮಾಸ್ಕ್ ಹಾಕಿಕೊಳ್ಳದೆ ತಿರುಗುತ್ತಿದ್ದವರು, ಕೊರೊನಾ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡದ ಅಸ್ತ್ರ ಬಳಸಿದ್ದರೂ ಜನರು ಮಾತ್ರ ಇನ್ನೂ ಬುದ್ದಿಕಲಿಯುತ್ತಿಲ್ಲ. ದಂಡ ಹಾಕಿ ಬುದ್ದಿ ಕಲಿಯುವ ಬದಲಿಗೆ ಜನರು ಬೇಜವಾಬ್ದಾರಿ ತೋರದೆ ತಮ್ಮ ಆರೋಗ್ಯ ರಕ್ಷಣೆಗಾಗಿ ಮಾಸ್ಕ್ ಹಾಕಿಕೊಂಡು ಜವಾಬ್ದಾರಿಯುತ ನಾಗರಿಕರಾಗಬೇಕು. ಇನ್ನೂ ಮುಂದೆಯೂ ಮಾಸ್ಕ್ ಹಾಕಿಕೊಳ್ಳದೇ ಓಡಾಡುವ ವಿರುದ್ಧ ದಂಡ, ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನರು ಕೊರೋನಾ ನಿಯಂತ್ರಣದ ನಿಯಮ ಪಾಲಿಸಬೇಕೆಂದು ಜಿಲ್ಲೆಯ ಜನತೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಮನವಿ ಮಾಡಿದ್ದಾರೆ.