ಬೆಂಗಳೂರು, ಆ.24- ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪಕ್ಷದ ಸಾರಥ್ಯವನ್ನು ತ್ಯಜಿಸಿದ ಬೆನ್ನಲ್ಲೇ ಪಕ್ಷದಲ್ಲಿ ಹಿರಿಯ ನಾಯಕರ ಬಗ್ಗೆ ರಾಹುಲ್ಗಾಂ ನೀಡಿದ ಹೇಳಿಕೆ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.
ನಾಯಕತ್ವ ಬದಲಾವಣೆ ಹಾಗೂ ಗಾಂ ಕುಟುಂಬೇತರರಿಗೆ ನಾಯಕತ್ವ ನೀಡಬೇಕೆಂದು ಕಾಂಗ್ರೆಸ್ನ 23 ಹಿರಿಯ ಧುರೀಣರು ಬರೆದಿರುವ ಪತ್ರ ಕುರಿತು ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ರಾಹುಲ್ಗಾಂಧಿ ನೀಡಿದ ಹೇಳಿಕೆ ಹಿರಿಯ ಕಾಂಗ್ರೆಸಿಗರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿರುವುದರ ಜತೆಗೆ 130 ವರ್ಷಗಳ ಇತಿಹಾಸದ ಕಾಂಗ್ರೆಸ್ನಲ್ಲಿ ದೊಡ್ಡ ಬಂಡಾಯವನ್ನೇ ಸೃಷ್ಟಿ ಮಾಡಿದೆ.
ರಾಹುಲ್ ಅವರ ಹೇಳಿಕೆಗೆ ನೂರಾರು ಕಾಂಗ್ರೆಸ್ ನಾಯಕರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಶಶಿ ತರೂರ್, ಆನಂದ್ ಶರ್ಮ, ಮನೀಶ್ ತಿವಾರಿ, ವಿವೇಕ್ ತಂಖಾ, ಮುಕುಲ್ ವಾಸ್ನಿಕ್, ಜತೀನ್ ಪ್ರಸಾದ್, ಭೂಪಿಂದರ್ ಸಿಂಗ್ ಹೂಡಾ, ರಾಜೀಂದರ್ ಕೌರ್ ಭಟ್ಟಲ್, ಡಾ. ಎಂ. ವೀರಪ್ಪ ಮೊಯ್ಲಿ, ಪೃಥ್ವಿರಾಜ್ ಚವಾಣ್, ಪಿ.ಜಿ. ಕುರಿಯನ್, ಅಜಯ್ ಸಿಂಗ್, ರೇಣುಕಾ ಚೌಧರಿ, ಮಿಲಿಂದ್ ದೌದರಿ, ರಾಜ್ ಬಬ್ಬರ್, ಅರವಿಂದ್ ಸಿಂಗ್, ಕೌಲ್ ಸಿಂಗ್ ಠಾಕೂರ್, ಅಖಿಲೇಶ್ ಪ್ರತಾಪ್ ಸಿಂಗ್ ಕುಲದೀಪ್ ಶರ್ಮ, ಯೋಗಾನಂದ ಶಾಸ್ತ್ರಿ, ಹಾಗೂ ಸಂದೀಪ್ ದೀಕ್ಷಿತ್ ಅವರು ಈ ಪತ್ರಕ್ಕೆ ಸಹಿ ಮಾಡಿ ನಾಯಕತ್ವ ಬದಲಾವಣೆಗೆ ಮನವಿ ಮಾಡಿದ್ದರು.
ಈ ವಿಷಯವನ್ನು ಕಾರ್ಯಕಾರಿಣಿಯಲ್ಲಿ ಪ್ರಸ್ತಾಪಿಸಿದ ರಾಹುಲ್ಗಾಂ ಅವರು, ಈ ಸಮಯದಲ್ಲಿ ಪತ್ರ ಬರೆಯಬೇಕಿತ್ತೆ ಮತ್ತು ಈ ಪತ್ರ ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಂತಿದೆ ಎಂದು ಹೇಳಿದ ಮಾತು ಹಿರಿಯ ಕಾಂಗ್ರೆಸಿಗರನ್ನು ಸಹಜವಾಗಿಯೇ ಕೆರಳಿಸಿದೆ.
ಕಾಂಗ್ರೆಸ್ನ ಹಿರಿಯ ಮುಖಂಡರಾದ ಗುಲಾಂನಬಿ ಆಜಾದ್ ಅವರು ಸಭೆಯಲ್ಲೇ ವಿರೋಧ ವ್ಯಕ್ತಪಡಿಸಿ, ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ನಾವು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ. ಒಪ್ಪಂದ ಸಾಬೀತಾದರೆ ರಾಜೀನಾಮೆ ನೀಡಲು ಸಿದ್ಧರಿದ್ದೇವೆ ಎಂದು ಗರಂ ಆಗಿದ್ದಾರೆ.
ಮತ್ತೊಬ್ಬ ಹಿರಿಯ ಧುರೀಣ ಕಪೀಲ್ಸಿಬಾಲ್ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿ ರಾಹುಲ್ ಅವರ ಹೇಳಿಕೆಯಿಂದ ತುಂಬಾ ಬೇಸರವಾಗಿದೆ. ನನ್ನ 30 ವರ್ಷಗಳ ಕಾಂಗ್ರೆಸ್ ನಿಷ್ಠೆಯಲ್ಲಿ ನಾನು ಬಿಜೆಪಿ ಪರ ಹೇಳಿಕೆ ನೀಡಿದವನಲ್ಲ. ನಾವು ಕಾಂಗ್ರೆಸಿಗರು. ಬಿಜೆಪಿಗೆ ಹೋಗುವವರಲ್ಲ ಎಂದು ಹೇಳಿದ್ದಾರೆ.