ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಅವಳಿ ನಗರದ ನೂತನ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ಅಧಿಕಾರ ಸ್ವೀಕರಿಸುವ ವೇಳೆ ಗಾಂಜಾ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಬ್ಬರು ಸನ್ಮಾನ ಮಾಡಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಮಾದಕವಸ್ತು ಸಾಗಾಟ ಮತ್ತು ಕೊಲೆ ಪ್ರಕರಣದ ಆರೋಪಿ ಖೇತ್ಸಿಂಗ್ ರಾಜಪುರೋಹಿತ ಸನ್ಮಾನ ಮಾಡಿದ್ದಾನೆ. ಅಲ್ಲದೇ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿ ಅಮಿತ್ ಬದ್ದಿಯೂ ಕೂಡ ಆಯುಕ್ತರಿಗೆ ಸನ್ಮಾನ ಮಾಡಿದ್ದು, ಹೂಗುಚ್ಛ ನೀಡುವ ಫೋಟೋ ವೈರಲ್ ಆಗಿದೆ.
ಭೂಷಣ್ ಬೋರಸೆ ಅವರು ಅಧಿಕಾರ ಸ್ವೀಕರಿಸುವ ವೇಳೆ ಹೂಗುಚ್ಛ ನೀಡಿ ಸನ್ಮಾನ ಮಾಡಲಾಗಿದ್ದು ಆಯುಕ್ತರ ಕಚೇರಿಗೆ ಇಂಥವರು ಪ್ರವೇಶಿಸಿದ್ದು ಹೇಗೆ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಇನ್ನು ಆರೋಪಿ ಖೇತ್ಸಿಂಗ್ ಮೇಲೆ ಎನ್ಡಿಪಿಎಸ್ ಕಾಯ್ದೆ ಅಡಿ ಕೇಸ್ ದಾಖಲಾಗಿದೆ. ಇಂಥವರು ದೊಡ್ಡ ಹುದ್ದೆ ಹೊಂದಿದವರೊಂದಿಗೆ ದೋಸ್ತಿ ಕುದುರಿಸಲು ಸನ್ಮಾನ ಮಾಡಿದ್ದಾರೆ. ರೌಡಿಶೀಟರ್ಗಳು, ಪಾತಕಿಗಳು ಸನ್ಮಾನದ ಮೂಲಕ ಮೆಚ್ಚುಗೆ ಪಡೆಯಲು ಯತ್ನಿಸಿದ್ದಾರೆ. ಹೊಸದಾಗಿ ಆಯುಕ್ತರಾಗಿ ಬಂದವರ ಬಳಿ ಇಂಥವರ ಬಗ್ಗೆ ಮಾಹಿತಿ ಇರುವುದಿಲ್ಲ. ಆದರೆ, ಪೊಲೀಸ್ ಆಯುಕ್ತಾಲಯದ ಸಿಬ್ಬಂದಿ ಕಣ್ಣು ಮುಚ್ಚಿ ಕುಳಿತಿದ್ದಾರಾ? ಅನ್ನೋದು ಸಾರ್ವಜನಿಕರ ಪ್ರಶ್ನೆ.
ಅಧಿಕಾರ ವಹಿಸಿಕೊಂಡ ಕೂಡಲೇ ಡ್ರಗ್ ಪೆಡ್ಲರ್ಗಳ ವಿರುದ್ಧ ಗುಡುಗಿದ್ದ ಬೋರಸೆ, ಇದೀಗ ಆರೋಪಿಗಳಿಂದಲೇ ಸನ್ಮಾನ ಸ್ವೀಕರಿಸಿದ ಫೋಟೋಗಳು ವೈರಲ್ ಆಗಿರೋದು ಚರ್ಚೆಗೆ ಗ್ರಾಸವಾಗಿದೆ.
Laxmi News 24×7