Breaking News

ಹಣ ವರ್ಗಾವಣೆ, ಆತ್ಮಹತ್ಯೆ ಪತ್ರ ಸೇರಿ ಎಲ್ಲ ದಾಖಲೆಗಳಿದ್ರೂ ನಾಗೇಂದ್ರ ರಾಜೀನಾಮೆ ನೀಡುತ್ತಿಲ್ಲ – ಆರ್.ಅಶೋಕ್

Spread the love

ಬೆಂಗಳೂರು: ಸಚಿವ ಚ187 ಕೋಟಿ ರೂ. ಹಗರಣ ನಡೆಸಿರುವುದಕ್ಕೆ ಹಣ ವರ್ಗಾವಣೆ, ಆತ್ಮಹತ್ಯೆ ಪತ್ರ ಸೇರಿ ಸೂಕ್ತ ದಾಖಲೆಗಳಿದ್ದರೂ ಅವರನ್ನು ವಜಾ ಮಾಡುತ್ತಿಲ್ಲ. ಅಂದರೆ ಈ ಹಗರಣದಲ್ಲಿ ಕೋಟ್ಯಂತರ ರೂಪಾಯಿ ಕಾಂಗ್ರೆಸ್ ಹೈಕಮಾಂಡ್‌ಗೆ ಸಂದಾಯವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಶಾಸಕರ ಭವನದ ಆವರಣದ ಶ್ರೀ ವಾಲ್ಮೀಕಿ ಮಹರ್ಷಿ ಪ್ರತಿಮೆ ಬಳಿ ಪ್ರತಿಭಟನೆ ವೇಳೆ ಮಾತನಾಡಿದ ಅವರು, ನಾವು ಮುಟ್ಟಿಸಿರುವ ಬಿಸಿಯನ್ನು ತಡೆದುಕೊಳ್ಳಲಾಗದೇ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ (Congress) ಶಾಸಕರು ಪ್ರತಿಭಟನೆ ಮಾಡಿದ್ದಾರೆ. ನಮ್ಮದು ಕೇವಲ ಒಂದು ಪಕ್ಷದ ಹೋರಾಟವಲ್ಲ. ಇದು ದಲಿತರ ಪರವಾದ ಹೋರಾಟ. 1 ಕೋಟಿಗೂ ಅಧಿಕ ದಲಿತರಿಗೆ ಸೇರಿದ 187 ಕೋಟಿ ರೂ. ಹಣವನ್ನು ಲೂಟಿ ಮಾಡಿದ ಸಚಿವ ಬಿ.ನಾಗೇಂದ್ರ  ವಿರುದ್ಧ ನಾವು ನ್ಯಾಯಯುತ ಹೋರಾಟ ಮಾಡುತ್ತಿದ್ದೇವೆ. ಲೂಟಿ ಮಾಡುವ ಮೂಲಕ ದಲಿತರ ಬದುಕನ್ನು ಕಾಂಗ್ರೆಸ್ ನಾಯಕರು ಹಾಳು ಮಾಡಿದ್ದಾರೆ. ಇದೇ ಹಣ ಬಡ ದಲಿತರಿಗೆ ಸಿಕ್ಕಿದ್ದರೆ ಅವರ ಮಕ್ಕಳು ಉತ್ತಮ ಉದ್ಯೋಗ ಪಡೆಯುತ್ತಿದ್ದರು. ಸಿಬಿಐ, ಇಡಿ ಚಾರ್ಜ್ಶೀಟ್‌ನಲ್ಲಿ ನಾಗೇಂದ್ರ ಪ್ರಮುಖ ಆರೋಪಿಯಾಗಿದ್ದಾರೆ. ಲೋಕಾಯುಕ್ತದಲ್ಲಿರುವ 31 ಪ್ರಕರಣಗಳಲ್ಲೂ ಇವರು ಮುಖ್ಯ ಆರೋಪಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

40 ಕೋಟಿ ವರ್ಗಾವಣೆ ಮಾಡಿದ ಬಗ್ಗೆ ಸೂಕ್ತ ದಾಖಲೆಯಿದೆ:
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಪಿ.ಚಂದ್ರಶೇಖರನ್ ಪ್ರಾಣ ಕಳೆದುಕೊಂಡು 187 ಕೋಟಿ ರೂ. ಅಕ್ರಮವನ್ನು ಬಹಿರಂಗ ಮಾಡಿದ್ದರು. ಸಚಿವರ ಆದೇಶದ ಮೇರೆಗೆ ನಾನು ಹಣ ವರ್ಗಾವಣೆ ಮಾಡಿದ್ದೇನೆ ಎಂದು ಅವರು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದರು. ಇದರಲ್ಲಿ ಭಾಗಿಯಾದ ಉಳಿದವರ ಹೆಸರನ್ನು ಕೂಡ ಬರೆದಿದ್ದಾರೆ. ಇದಕ್ಕಿಂತ ದೊಡ್ಡ ದಾಖಲೆ ಬೇಕಿಲ್ಲ. 40 ಕೋಟಿ ರೂ. ವರ್ಗಾವಣೆ ಮಾಡಿರುವ ಬಗ್ಗೆ ಸೂಕ್ತ ದಾಖಲೆಗಳಿವೆ. ಯೂನಿಯನ್ ಬ್ಯಾಂಕ್‌ನ ಚೆಕ್‌ಗಳು, ವರ್ಗಾವಣೆಯಾದ ಬ್ಯಾಂಕ್ ಖಾತೆಗಳ ಹೆಸರು, ಮೊದಲಾದ ದಾಖಲೆಗಳಿವೆ. ವಾಲ್ಮೀಕಿ ನಿಗಮದಲ್ಲಿ 50 ಕೋಟಿ ರೂ. ಹಣ ಠೇವಣಿ ಇಟ್ಟು, ಪ್ರತ್ಯೇಕವಾಗಿ ಸಾಲ ಪಡೆಯಲಾಗಿದೆ. ಬುದ್ಧಿ ಇರುವ ಯಾವುದೇ ಅಧಿಕಾರಿ ಈ ರೀತಿ ಮಾಡಲ್ಲ. ಹೀಗೆ ವರ್ಗಾವಣೆ ಮಾಡಿದರೆ ಸರ್ಕಾರಕ್ಕೆ ತಿಳಿಯುವುದಿಲ್ಲ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಒಂದೇ ದಿನ ಠೇವಣಿ ಇರಿಸಿ, ಅದೇ ದಿನ ಸಾಲ ಪಡೆಯಲಾಗಿದೆ ಎಂದಿದ್ದಾರೆ.

ಆರ್ಥಿಕ ಇಲಾಖೆ ನಿಯಮವಿಲ್ಲದೆ ಯಾವುದೇ ಇಲಾಖೆ ಹೊಸ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಿಲ್ಲ ಎಂಬ ನಿಯಮವಿದೆ. ಆಗ ಸಿದ್ದರಾಮಯ್ಯ ಆರ್ಥಿಕ ಇಲಾಖೆಯ ಸಚಿವರಾಗಿದ್ದರು. 5 ಕೋಟಿ ರೂ. ಗಿಂತ ಹೆಚ್ಚು ಹಣವಿದ್ದರೆ, ಅದು ಸಚಿವ ಸಂಪುಟದಲ್ಲಿ ಚರ್ಚೆಯಾಗಬೇಕು. ಈ ಹಣವನ್ನು ಟೆಂಡರ್ ಕರೆದು ಬಳಸಬೇಕಿತ್ತು. ಆದರೆ ಟೆಂಡರ್ ಇಲ್ಲದೆ ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿದೆ. ತೆಲಂಗಾಣ ಚುನಾವಣೆಗೆ ಇದನ್ನು ಬಳಸಿ ಎಂದು ಹೈಕಮಾಂಡ್ ಸೂಚಿಸಿದ್ದಕ್ಕೆ, ಬಾರ್‌ಗಳಿಗೆ, ವಾಹನ ಅಂಗಡಿ, ಚಾಲಕರಿಗೆ ಹಣ ನೀಡಲಾಗಿದೆ. ಇದೇ ಹಣದಲ್ಲಿ ಲ್ಯಾಂಬೋರ್ಗಿನಿ ಕಾರು, 40 ಕೆಜಿ ಚಿನ್ನ ಖರೀದಿಸಲಾಗಿದೆ. ರಾಜ್ಯದಲ್ಲಿ ನೋಡಿದರೆ ಬಡ ದಲಿತರ ಮೈ ಮೇಲೆ ಒಂದು ಗ್ರಾಂ ಚಿನ್ನ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

1.20 ಕೋಟಿ ರೂ. ಮೊತ್ತ ಸಚಿವ ಬಿ.ನಾಗೇಂದ್ರ ಕುಟುಂಬದ ಖಾತೆಗೆ ಹೋಗಿದೆ. ಅದನ್ನು ಕುಟುಂಬದವರು ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲ ಸಾಕ್ಷಿ, ದಾಖಲೆಗಳಿದ್ದರೂ ಒಬ್ಬ ಸಚಿವನಿಗಾಗಿ ಸದನವನ್ನೇ ಮುಂದೂಡುವುದು ನ್ಯಾಯವಲ್ಲ. ಬಳ್ಳಾರಿಯಲ್ಲಿ ಮಹಿಳಾ ಶಾಸಕಿ ಇದ್ದಾರೆ. ಬೇರೆ ದಲಿತ ನಾಯಕರೂ ಇದ್ದಾರೆ. ನಾಗೇಂದ್ರ ಬದಲು ಅವರನ್ನೇ ಸಚಿವರಾಗಿ ಮಾಡಲಿ. ಎಂಥವರನ್ನು ಸಚಿವರಾಗಿ ಮಾಡಬೇಕೆಂಬ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ತಿಳಿಸಿದ್ದಾರೆ.

ಬರ ನಿರ್ವಹಣೆಗೆ ಒಂದು ಜಿಲ್ಲೆಗೆ ಕನಿಷ್ಠ 300 ಕೋಟಿ ರೂ. ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಒಂದು ಕೋಟಿ ರೂ. ಬಿಡುಗಡೆ ಮಾಡಿ, ಪರಿಹಾರಕ್ಕಾಗಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ. ಇಷ್ಟು ಕಡಿಮೆ ಪರಿಹಾರದಿಂದ ಯಾರಿಗೂ ಲಾಭವಿಲ್ಲ. ಮೊದಲು ಪರಿಹಾರ ಕೊಡಲಿ, ನಂತರ ಸದನದಲ್ಲಿ ಚರ್ಚೆಗೆ ಬರಲಿ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ನಾಗೇಂದ್ರ ರಾಜೀನಾಮೆ ಬಗ್ಗೆ ನೋಟಿಸ್‌ ‌ಕೊಟ್ಟು ವಿಪಕ್ಷ ಚರ್ಚೆ ಮಾಡಲಿ: ಡಿಕೆಶಿ

Spread the loveಬೆಂಗಳೂರು: ವಿಧಾನ ಪರಿಷತ್ ಕಲಾಪ 5ನೇ ದಿನವೂ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಕಲಾಪ ಬಲಿಯಾಯ್ತು. ವಿಪಕ್ಷಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ