ನವದೆಹಲಿ: ಲಡಾಖ್ನಲ್ಲಿ ರಸ್ತೆ ತಡೆ ವೇಳೆ ಭದ್ರತಾ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ 25 ವರ್ಷದ ಯುವತಿ ಕೊನೆಗೂ ಭಾರತೀಯ ಸೇನೆ ಹಾಗೂ ಪೊಲೀಸರ ಬಳಿ ಕ್ಷಮೆಯಾಚಿಸಿದ್ದಾಳೆ.
ಖಾಸಗಿ ವಾಹಿನಿಗೆ ಜೊತೆ ಮಾತನಾಡಿದ ಯುವತಿ, ತಾನು ಸಶಸ್ತ್ರ ಪಡೆಗಳನ್ನು ಅವಮಾನಿಸುವ ಅಥವಾ ಈ ಘಟನೆಯ ಮೂಲಕ ಪ್ರಚಾರ ಪಡೆಯುವ ಯಾವುದೇ ಉದ್ದೇಶವಿರಲಿಲ್ಲ. ಗಂಟೆಗಟ್ಟಲೆ ಕಾದರೂ ರಸ್ತೆ ತಡೆದು ಕಾರಣ ತಿಳಿಸದ್ದಕ್ಕೆ ಹತಾಶೆಯಿಂದ ಹಾಗೆ ಮಾತನಾಡಿದ್ದಾಗಿ ಆಕೆ ಸ್ಪಷ್ಟಪಡಿಸಿದ್ದಾಳೆ.
ಜುಲೈ 26ರ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಭದ್ರತಾ ದೃಷ್ಟಿಯಿಂದ ದ್ರಾಸ್ ಪ್ರದೇಶದ ಮಿನಿಮಾರ್ಗ್-ಜೋಜಿಲಾ-ಸೋನಾಮಾರ್ಗ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಈ ವೇಳೆ ಲಡಾಖ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಯುವತಿ ಸೇರಿದಂತೆ ಹಲವು ಪ್ರವಾಸಿಗರನ್ನು ಮಿನಿಮಾರ್ಗ್ ಚೆಕ್ಪೋಸ್ಟ್ ಬಳಿ ತಡೆಯಲಾಗಿತ್ತು.
ವಿಐಪಿ ಸಂಚಾರದ ಹೆಸರಿನಲ್ಲಿ ಐದಾರು ಗಂಟೆಗಳ ಕಾಲ ರಸ್ತೆ ತಡೆದಿದ್ದನ್ನು ಪ್ರಶ್ನಿಸಿದ ಯುವತಿ, ಮಂತ್ರಿಗಳಿಗೆ ಹೋಗಲು ಹೇಗೆ ಅವಕಾಶ ನೀಡಿದ್ದೀರಿ? ನಾವೇನು ಇವೆಲ್ಲವನ್ನು ಸಹಿಸಿಕೊಳ್ಳಲು ಹಣ ಖರ್ಚು ಮಾಡಿ ಇಲ್ಲಿಗೆ ಬಂದಿದ್ದೇವಾ? ನಾವು ಜೆನ್-ಝಿ . ಇಂತಹ ಅಸಂಬದ್ಧಗಳನ್ನು ನಾವು ಸಹಿಸುವುದಿಲ್ಲ ಎಂದು ಭದ್ರತಾ ಸಿಬ್ಬಂದಿ ವಿರುದ್ಧ ಕೂಗಾಡಿದ್ದಳು. ಈ ವೇಳೆ ಅಲ್ಲಿದ್ದ ಇತರ ಪ್ರವಾಸಿಗರು ಆಕೆಯನ್ನು ಬೆಂಬಲಿಸಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದರು.
ಕ್ಷಮೆ ಕೇಳಿದ ಯುವತಿ
ಈ ಬಗ್ಗೆ ಮಾತನಾಡಿದ ಯುವತಿ, 6 ಗಂಟೆಗಳ ಕಾಲ ಶೌಚಾಲಯಕ್ಕೂ ಹೋಗಲು ಸಾಧ್ಯವಾಗದೆ ತೀವ್ರ ಸಂಕಷ್ಟ ಅನುಭವಿಸಿದೆವು. ಮುಂದೆ ಸಾರ್ವಜನಿಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗಲಾಟೆ ನಡೆಯುತ್ತಿದ್ದ ಜಾಗಕ್ಕೆ ಹೋದಾಗ ಜನರ ಪ್ರಚೋದನೆಯಿಂದ ಆ ಕ್ಷಣದಲ್ಲಿ ಹತಾಶೆಯಿಂದ ಮಾತನಾಡಿದೆ. ‘ವಿ ಆರ್ ಜೆನ್-ಝಿ’ ಎಂಬ ಮಾತು ಕೂಡ ಅಚಾನಕ್ಕಾಗಿ ಬಾಯಿಂದ ಬಂದಿದ್ದೇ ಹೊರತು ಬೇರೆ ಯಾವುದೇ ದುರುದ್ದೇಶವಿರಲಿಲ್ಲ.
ಆ ಪದ ಎಲ್ಲಿಂದ ಬಂತು ಎಂದು ನನಗೇ ಗೊತ್ತಿಲ್ಲ. ನನ್ನ ಹಿಂದಿದ್ದ ಅನೇಕ ಜನರು ನನ್ನನ್ನು ಪ್ರಚೋದಿಸುತ್ತಿದ್ದರು. ಇಲ್ಲಿ ಪ್ರತಿ ದಿನ ಹೀಗೆಯೇ ನಡೆಯುತ್ತದೆ. ಪ್ರವಾಸಿಗರು ಹಾಗಾಗಿ ನೀವು ಇದನ್ನು ಮೊದಲ ಬಾರಿಗೆ ಎದುರಿಸುತ್ತಿದ್ದೀರಿ. ನಾವು ಪ್ರತಿದಿನ ಇದನ್ನು ಎದುರಿಸುತ್ತೇವೆ’ ಎಂದೆಲ್ಲ ಹೇಳುತ್ತಿದ್ದರು. ಆ ಕ್ಷಣದಲ್ಲಿ, ನಾನು ಹೇಳುತ್ತಿರುವುದು ಇಷ್ಟೊಂದು ದೊಡ್ಡ ಸಮಸ್ಯೆಯಾಗುತ್ತದೆ ಎಂದು ನನಗೆ ಅನ್ನಿಸಲೇ ಇಲ್ಲ. ಅದು ತಪ್ಪಾಗಿ ಬಾಯಿಂದ ಬಂದಿದ್ದಷ್ಟೇ. ಜೆನ್ ಝಿ ಉಲ್ಲೇಖಿಸಿ ಯಾವುದೇ ಹೇಳಿಕೆ ನೀಡುವ ಉದ್ದೇಶ ನನಗಿರಲಿಲ್ಲ.ನಾನು ಒಬ್ಬ ಸಾಮಾನ್ಯ 25 ವರ್ಷದ ಯುವತಿ. ಈ ವಿಚಾರ ಇಷ್ಟೊಂದು ದೊಡ್ಡದಾಗುತ್ತದೆ ಎಂಬ ಕಲ್ಪನೆಯೇ ನನಗಿರಲಿಲ್ಲ. ಈಗ ನಿಮ್ಮ ಮೂಲಕ, ದೇಶದ ಸಮಸ್ತ ಜನರಲ್ಲಿ, ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಲಡಾಖ್ ಪೊಲೀಸ್ ಹಾಗೂ ವಿಶೇಷವಾಗಿ ಒಮರ್ ಅಬ್ದುಲ್ಲಾ ಅವರಲ್ಲಿ ನಾನು ಮತ್ತೊಮ್ಮೆ ಕ್ಷಮೆಯಾಚಿಸುತ್ತಿದ್ದೇನೆ. ನನ್ನಿಂದಾಗಿ ಇಷ್ಟೊಂದು ಜನರಿಗೆ ನೋವಾಗಿದ್ದಕ್ಕೆ ನನಗೆ ತುಂಬಾ ನಾಚಿಕೆಯಾಗುತ್ತಿದೆ.”
ಆ ವಿಡಿಯೋ ವೈರಲ್ ಆದ ನಂತರ ಬಂದ ನಕಾರಾತ್ಮಕ ಪ್ರತಿಕ್ರಿಯೆಗಳಿಂದ ನಾನು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ನನ್ನ ಮಾತಿನಿಂದ ಸೇನಾ ಪಡೆಗಳು ಹಾಗೂ ದೇಶದ ಜನರ ಮನಸ್ಸಿಗೆ ನೋವಾಗಿದ್ದಕ್ಕೆ ನಾನು ತೀವ್ರವಾಗಿ ಪಶ್ಚಾತ್ತಾಪ ಪಡುತ್ತೇನೆ ಎಂದು ಹೇಳಿದ್ದಾಳೆ.
Laxmi News 24×7