ಯಾದಗಿರಿ: ಆಸ್ತಿ ವಿಚಾರಕ್ಕೆ ಪತಿ, ಪತ್ನಿ ನಡುವೆ ನಡೆದ ಗಲಾಟೆ ತಾರಕಕ್ಕೇರಿ ತನ್ನಿಬ್ಬರು ಮಕ್ಕಳನ್ನ ಕಾಲುವೆಗೆ ಎಸೆದು ತಂದೆ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಹೊರಭಾಗದಲ್ಲಿ ನಡೆದಿದೆ.
ಕಕ್ಕಸಗೇರಾ ಗ್ರಾಮದ ಆರೋಪಿ ತಂದೆ ಶಾಂತಪ್ಪ ತನ್ನ ಇಬ್ಬರು ಮಕ್ಕಳಾದ ಸಾನ್ವಿ(9) ಹಾಗೂ ಸೃಜನ್ನನ್ನು (2) ಕೊಲೆ ಮಾಡಿದ್ದಾನೆ. ಮೂವರು ಮಕ್ಕಳನ್ನು ಕೊಲೆ ಮಾಡಲೆಂದು ಆರೋಪಿ ತಂದೆ ಕಾಲುವೆಗೆ ಕರೆದೊಯ್ದಿದ್ದ. ಆದರೆ ಈ ವೇಳೆ ಮಗಳು ಕಣ್ಣೀರಿಟ್ಟಿದ್ದಕ್ಕೆ ಕರಗಿ ಅವಳನ್ನು ಬಿಟ್ಟು ಇನ್ನುಳಿದ ಇಬ್ಬರನ್ನು ಕಾಲುವೆಗೆ ಪಾಪಿ ತಂದೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.
ಮಂಗಳವಾರ (ಆ.18) ಶಾಂತಪ್ಪ ತನ್ನ ಪತ್ನಿ ಜೊತೆ ಜಗಳ ಮಾಡಿಕೊಂಡಿದ್ದ. ಇದೇ ಕೋಪದಲ್ಲಿ ಮೂವರು ಮಕ್ಕಳನ್ನು ಬೈಕ್ ಮೇಲೆ ಕಾಲುವೆ ಬಳಿ ಕರೆದೊಯ್ದು, ಮೂವರನ್ನು ಎಸೆಯಲು ಮುಂದಾಗಿದ್ದ.
ಮಗಳ ಕಣ್ಣೀರಿಗೆ ಕರಗಿದ ಪಾಪಿ ತಂದೆ:
ಕೊನೆ ಕ್ಷಣದಲ್ಲಿ ಓರ್ವ ಮಗಳು ತಂದೆಯನ್ನು ಅಪ್ಪಿಕೊಂಡು, ಅಪ್ಪ ನನನ್ನು ಸಾಯಿಸಬೇಡ ಎಂದು ಅತ್ತಿದ್ದಾಳೆ. ಕಣ್ಣೀರಿಗೆ ಕರಗಿದ ಅಪ್ಪ ಆಕೆಯನ್ನು ಬಿಟ್ಟು ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿದ್ದಾನೆ. ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ. ಸದ್ಯ ಸ್ಥಳಕ್ಕೆ ಗೋಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸದ್ಯ ಪೊಲೀಸರು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಮೃತದೇಹ ಪತ್ತೆ ನಂತರ ಕೊಲೆ ಕೇಸ್ ದಾಖಲು ಮಾಡಿ, ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಯಾದಗಿರಿ ಎಸ್ಪಿ ಮಾಹಿತಿ ನೀಡಿದ್ದಾರೆ.
Laxmi News 24×7