ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ, ನೈಸ್ ರೋಡ್ ಟೋಲ್ ವಿರೋಧಿಸಿ ಫ್ರೀಡಂಪಾರ್ಕ್ನಲ್ಲಿ ಇಂದು (ಆ.18) ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಿತು.
ಬಿಡದಿ ಟೌನ್ಶಿಪ್ ವಿರೋಧಿಸಿ ಕರೆ ಕೊಟ್ಟಿದ್ದ ಪಾದಯಾತ್ರೆ ಎರಡೇ ದಿನಕ್ಕೆ ಮೊಟಕುಗೊಳಿಸಲಾಗಿತ್ತು. ಹೀಗಾಗಿ ಇಂದು ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನಾ ಸಮಾವೇಶದ ಮೂಲಕ ವಿರೋಧ ವ್ಯಕ್ತಪಡಿಸಲಾಯ್ತು. ದೇವೇಗೌಡರು, ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಾನು ಚರ್ಚೆಗೆ ಸಿದ್ಧ, ಬನ್ನಿ ಮಾತಾಡೋಣ:
ಪ್ರತಿಭಟನಾ ಸಮಾವೇಶದಲ್ಲಿ ಮಾತಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಸರ್ಕಾರಕ್ಕೆ ಸವಾಲೆಸೆದರು. ಬಿಡದಿ ಟೌನ್ಶಿಪ್, ನೈಸ್ ವಿಚಾರವಾಗಿ ಸರ್ಕಾರ ಭಂಡತನ ಪ್ರದರ್ಶನ ಮಾಡ್ತಿದೆ. ನಾನೇ ವೇದಿಕೆ ಸಿದ್ಧ ಮಾಡ್ತೀನಿ. ಕಾಂಗ್ರೆಸ್ನ ಹಾಲಿ, ಮಾಜಿ ಶಾಸಕರು ಬಂದು ಪ್ರಶ್ನೆ ಮಾಡಿ ನಾನೇ ಏಕಾಂಗಿ ಆಗಿ ಎದುರಿಸುತ್ತೇನೆ. ಕನಕಪುರದಲ್ಲಿ ಜಮೀನು ಮಾರಾಟ ಮಾಡಬೇಡಿ ಅಂದ ಶಿವಕುಮಾರ್ ಇವತ್ತು ಬಿಡದಿ ರೈತರ ಕೃಷಿ ಜಾಗ ಪಡೆಯೋಕೆ ಹೊರಟಿದ್ದೀರಾ. ನಾನು ಚರ್ಚೆಗೆ ಸಿದ್ಧ. ಬನ್ನಿ ಮಾತಾಡೋಣ ಹೆದರಿ ಓಡಿ ಹೋಗಲ್ಲ ಎಂದರು.
ದೇವೇಗೌಡರ ಉಗುರಿಗೆ ನೀವು ಸಮ ಇಲ್ಲ:
ಇನ್ನು ನೈಸ್ ಯೋಜನೆ ವಿಚಾರವಾಗಿ ವಾಗ್ದಾಳಿ ನಡೆಸಿದ ಅವರು, ನೈಸ್ ಯೋಜನೆ ಟೇಕ್ ಓವರ್ ಮಾಡೋಕೆ ಮುಂದಾಗಿದ್ದಾರೆ. ನೈಸ್ ಕಂಪನಿ ಒಂದು ರೂಪಾಯಿ ಯೋಜನೆಗೆ ಹಾಕಿಲ್ಲ. ರೈತರಿಗೆ ಪರಿಹಾರ ಕೊಟ್ಟಿಲ್ಲ. ಸರ್ಕಾರದ ಭೂಮಿ ಬ್ಯಾಂಕ್ನಲ್ಲಿ ಅಡವಿಟ್ಟು ಹಣತಂದು ನೈಸ್ ಯೋಜನೆ ಮಾಡಿದ್ದು, 2002ರಿಂದಲೂ ದೇವೇಗೌಡರು ನೈಸ್ ವಿರುದ್ಧ ಹೋರಾಡುತ್ತಿದ್ದಾರೆ. ಈಗ ದೇವೇಗೌಡರನ್ನು ಪ್ರಶ್ನೆ ಮಾಡ್ತೀರಾ? ಅವರ ಉಗುರಿಗೆ ನೀವು ಸಮ ಅಲ್ಲ. ಅಲ್ಲದೇ ನಿಮಗೆ ರೈತರ ಬಗ್ಗೆ ಕಾಳಜಿ ಇದ್ದರೆ ನೈಸ್ ಭೂಮಿ ರೈತರಿಗೆ ವಾಪಸ್ ಕೊಡಿ. ದೆಹಲಿಯಲ್ಲಿ ಆದ ರೈತರ ಹೋರಾಟದ ರೀತಿ ಆಗಬೇಕು. ಧೈರ್ಯವಿದ್ದರೆ ನೇರವಾಗಿ ಚರ್ಚೆಗೆ ಬನ್ನಿ ಎಂದು ಗುಡುಗಿದರು.
ರಿಯಲ್ ಎಸ್ಟೇಟ್ ಮಾಫಿಯಾ ಮಾಡೋಕೆ ಜಮೀನು ಕಸಿಯುತ್ತಿದೆ ಸರ್ಕಾರ:
ಇನ್ನು ಸರ್ಕಾರದ ವಿರುದ್ಧ ಜೆಡಿಎಸ್ ಯುವನಾಯಕ ನಿಖಿಲ್ ಸಹ ವಾಗ್ದಾಳಿ ನಡೆಸಿದ್ರು. ರಿಯಲ್ ಎಸ್ಟೇಟ್ ಮಾಫಿಯಾ ಮಾಡೋಕೆ ಸರ್ಕಾರ ಜಮೀನು ಕಸಿಯುತ್ತಿದೆ. ಜಿಲ್ಲೆಯ 4 ಶಾಸಕರಿಗೆ ಆಶೀರ್ವಾದ ಮಾಡಿದ್ದಾರೆ. ಸಚಿವರು ಆಗಿದ್ದಾರೆ. ಆದರೆ ಜನರ ಕಷ್ಟ ಕೇಳುವ ಕೆಲಸ ಸಚಿವರು ಮಾಡ್ತಿಲ್ಲ. ಈ ಯೋಜನೆ ಆದಾಗ ಡಿಕೆಶಿ ಅವರು ಸಿಎಂ ಆಗಿರಲಿಲ್ಲ. ಸಿಎಂ ಕುರ್ಚಿ ನೋಡಿ ಹೊಟ್ಟೆ ಕಿಚ್ಚು ಬೀಳುವ ಜಾಯಮಾನ ನಮ್ಮದಲ್ಲ. ಇನ್ನು ಇದೆಲ್ಲದರ ಚರ್ಚೆಗೆ ನಿಖಿಲ್ ಸಿಎಂ ಡಿಕೆಶಿಗೆ ಸಮಯ ಕೇಳಿದರು.
ಇನ್ನು ನೈಸ್ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡರು 25-26 ವರ್ಷದಿಂದ ಈ ದಂಧೆ ನಡೆಯುತ್ತಿದೆ. ಡಿಕೆಶಿ ಇದಕ್ಕೆ ಉತ್ತರ ಕೊಡಬೇಕು. ಸರ್ಕಾರಕ್ಕೆ ಅಭಿವೃದ್ಧಿ ಮಾಡಲು ಹಣ ಇಲ್ಲ. ಹೀಗಾಗಿ ಕೋರ್ಟ್ ಒಪ್ಪಂದ ಉಲ್ಲಂಘನೆ ಆಗಿದೆ ಅಂದ್ರೂ ನೈಸ್ ಟೋಲ್ ಹೆಸರಲ್ಲಿ ಹಣ ಲೂಟಿ ಆಗ್ತಿದೆ. ಮುಂದಿನ ದಿನಗಳಲ್ಲಿ ನೈಸ್ ವಿರುದ್ಧ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದರು.
ಇನ್ನು ಬಿಡದಿ ಟೌನ್ಶಿಪ್ ಮತ್ತು ನೈಸ್ ಯೋಜನೆ ಕುರಿತು ವಿಧಾನಸಭೆಯಲ್ಲಿ ಸಿಎಂ ಡಿಕೆ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟಿದ್ದಾರೆ. ನೈಸ್ ಯೋಜನೆ ದೇವೇಗೌಡರು ಮಾಡಿದ್ದು, ಕುಮಾರಸ್ವಾಮಿ ಬಿಡದಿ ಟೌನ್ಶಿಪ್ ಮಾಡಿದ್ರು. ಅವರು ಮಾಡಿದ್ದನ್ನು ನಾನು ಮುಂದುವರಿಸುತ್ತೇನೆ. ಕೆಲ ಲೋಪ ದೋಷಗಳು ಇರಬಹುದು. ಅದನ್ನ ಸರಿ ಮಾಡೋಣ ಬಿಡಿ ಎಂದಿದ್ದಾರೆ. ಈ ನಡುವೆ ವಿಧಾನಸೌಧ ಮುತ್ತಿಗೆಯನ್ನು ಜೆಡಿಎಸ್ ಕೈ ಬಿಟ್ಟಿದೆ. ಕಾನೂನಿಗೆ ಗೌರವ ಕೊಟ್ಟು ವಿಧಾನಸೌಧ ಮುತ್ತಿಗೆ ಕೈ ಬಿಟ್ಟಿದ್ದೇವೆ. ಆದರೆ ಯೋಜನೆಗಳ ವಿರುದ್ಧ ನಮ್ಮ ಹೋರಾಟ. ರೈತರ ಪರವಾಗಿ ನಮ್ಮ ಹೋರಾಟ ಮುಂದುವರೆಯುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
Laxmi News 24×7