ಚಿಕ್ಕಮಗಳೂರು: 4 ವರ್ಷ 1 ತಿಂಗಳ ಬಾಲಕ ಕೇವಲ 2 ನಿಮಿಷ 53 ಸೆಕೆಂಡಿನಲ್ಲಿ ಹನುಮಾನ್ ಚಾಲೀಸ 40 ಶ್ಲೋಕಗಳನ್ನು ನಿರರ್ಗವಾಗಿ ಹೇಳುವ ಮೂಲಕ ಆಂಜನೇಯನ ಭಕ್ತರನ್ನ ಆಶ್ಚರ್ಯಕ್ಕೀಡು ಮಾಡಿದ್ದಾನೆ. ಈ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗಡಿಗಳ್ಳಿ ಗ್ರಾಮದ ಮಧುಸೂದನ್-ಸುಪ್ರಿಯಾ ದಂಪತಿಯ ಪುತ್ರ ಇಶನ್ ಕೃಷ್ಣ ತನ್ನ ಅಭೂತಪೂರ್ವ ನೆನಪಿನ ಶಕ್ತಿಯಿಂದ ಆಸ್ತಿಕ ಸಮೂಹ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.
ಫೆಬ್ರವರಿ 9, 2022ರಂದು ಜನಿಸಿದ ಈ ಬಾಲಕನಿಗೆ ಈಗಷ್ಟೇ ಕೇವಲ ನಾಲ್ಕು ವರ್ಷ ಒಂದು ತಿಂಗಳು. ಈ ಕಿರಿಯ ವಯಸ್ಸಿನಲ್ಲೇ ಹನುಮಾನ್ ಚಾಲೀಸ್ ನ ಸಂಪೂರ್ಣ 40 ಶ್ಲೋಕಗಳನ್ನ ಕೇವಲ 2 ನಿಮಿಷ 53 ಸೆಕೆಂಡ್ಗಳಲ್ಲಿ ನಿರರ್ಗಳವಾಗಿ ಪಠಿಸಿ ಕೇಳುಗರನ್ನ ಆಶ್ಚರ್ಯಕ್ಕೀಡು ಮಾಡಿದ್ದಾನೆ. ಮಗುವಿನ ಅದ್ಭುತ ಏಕಾಗ್ರತೆ, ನಿರಂತರ ಅಭ್ಯಾಸ ಹಾಗೂ ಹೆತ್ತವರ ಪ್ರೋತ್ಸಾಹವೇ ಈ ಮಹಾನ್ ಸಾಧನೆಗೆ ಕಾರಣವಾಗಿದೆ. ಅಪರೂಪದ ಕಲಾ ಪ್ರತಿಭೆ ಮತ್ತು ಈತನ ಆಧ್ಯಾತ್ಮಿಕ ಜ್ಞಾನಕ್ಕೆ ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಕಲಾಂಸ್ ವರ್ಲ್ಡ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ನಂತಹ ಪ್ರಮುಖ ದಾಖಲೆಗಳ ಪಟ್ಟಿಯಲ್ಲಿ ಈತನ ಹೆಸರು ಸೇರ್ಪಡೆಯಾಗಿದೆ.
ಈ ಪುಟ್ಟ ಸಾಧಕನಿಗೆ ಸ್ಪಿರಿಚುಯಲ್ ಜೀನಿಯಸ್ ಆಫ್ ದಿ ಇಯರ್ 2026, ಹೆಮ್ಮೆಯ ಕನ್ನಡಿಗ 2026, ಸ್ವಾಮಿ ವಿವೇಕಾನಂದ ಗ್ಲೋಬಲ್ ಐಕಾನ್ ಅವಾರ್ಡ್, ಭಾರತ ರತ್ನ ಲೆಗಸಿ ಅವಾರ್ಡ್ ಮತ್ತು ಮದರ್ ತೆರೇಸಾ ಹ್ಯುಮಾನಿಟೇರಿಯನ್ ಸರ್ವಿಸ್ ಅವಾರ್ಡ್ ನಂತಹ ಹಲವಾರು ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವಗಳು ಒಲಿದು ಬಂದಿವೆ. ಸನಾತನ ಸಂಸ್ಕೃತಿ ಮತ್ತು ಶ್ಲೋಕ ಪಠಣದಲ್ಲಿ ಹೊಸ ಪೀಳಿಗೆಗೆ ಮಾದರಿಯಾಗಿರುವ ಈ ಪುಟ್ಟ ಬಾಲಕನ ತೊದಲು ನುಡಿಯ ಶ್ಲೋಕ ಪಠಣಕ್ಕೆ ನಾಡಿನ ಎಲ್ಲೆಡೆಯಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.
Laxmi News 24×7