ಹಾಸನ: ಬಗರ್ ಹುಕುಂ ಭೂ ಮಂಜೂರಾತಿ ಯೋಜನೆಯಲ್ಲಿ ಅಕ್ರಮ ಎಸಗಿದ್ದಾರೆಂಬ ಆರೋಪದಡಿ ಸಿಐಡಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಬೇಲೂರು ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರಿಗೆ ಕೊನೆಗೂ ಜಾಮೀನು ಮಂಜೂರಾಗಿದ್ದು, 52 ದಿನಗಳ ಜೈಲುವಾಸದ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಮಂಗಳವಾರ ನ್ಯಾಯಾಲಯವು ಜಾಮೀನುಮಂಜೂರು ಮಾಡಿದ್ದು, ಬುಧವಾರ ರಾತ್ರಿ ಅಗತ್ಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅವರು ಕಾರಾಗೃಹದಿಂದ ಹೊರಬಂದರು.
ಮಾಜಿ ಶಾಸಕರು ಜೈಲಿನಿಂದ ಹೊರಬರುತ್ತಿದ್ದಂತೆಯೇ ಹೊರಗಡೆ ನೆರೆದಿದ್ದ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಹೂವಿನ ಹಾರ ಹಾಕಿ, ಹೆಗಲ ಮೇಲೆ ಹೊತ್ತುಕೊಂಡು ಜಯಘೋಷಗಳೊಂದಿಗೆ ಅತ್ಯಂತ ಅದ್ದೂರಿಯಾಗಿ ಸ್ವಾಗತಿಸಿದರು.
ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎಸ್. ಲಿಂಗೇಶ್, ನಮ್ಮ ವೈರಿಗೂ ಸಹ ಇಂತಹ ಪರಿಸ್ಥಿತಿ ಬರಬಾರದು. ನಾನು ಮಾಡದಿರುವ ತಪ್ಪಿಗೆ 52 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದೇನೆ. 1988ರಲ್ಲಿ ಅರ್ಜಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳಿಗೆ ನಾವು ಭೂಮಿ ಮಂಜೂರು ಮಾಡಿದ್ದೇವೇ ಹೊರತು ಯಾವುದೇ ಅಕ್ರಮ ಎಸಗಿಲ್ಲ ಎಂದರು.
ಈ ವಿಚಾರದಲ್ಲಿ ನಾನಾಗಲಿ ಅಥವಾ ಬೇಲೂರಿನ ಮಾಜಿ ಶಾಸಕರಾಗಿದ್ದ ದಿವಂಗತ ರುದ್ರೇಶ್ಗೌಡ ಅವರಾಗಲಿ ಯಾವುದೇ ತಪ್ಪು ಮಾಡಿಲ್ಲ. ಕಾನೂನುಬದ್ಧವಾಗಿಯೇ ಕೆಲಸ ಮಾಡಿದ್ದೇವೆ. ತಮ್ಮ ಮೇಲಿರುವ ಎಲ್ಲಾ ಆರೋಪಗಳಿಂದ ಸಂಪೂರ್ಣವಾಗಿ ಮುಕ್ತರಾಗಿ ಆಚೆ ಬರುವುದಾಗಿ ಅವರು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
Laxmi News 24×7