ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಹಿಡಕಲ್ ಜಲಾಶಯ ತುಂಬಲಾರಂಭಿಸಿದೆ. ಹಿನ್ನೀರಿನಲ್ಲಿರುವ ಐತಿಹಾಸಿಕ ಹುನ್ನೂರು ವಿಠ್ಠಲ ದೇವಸ್ಥಾನ ಮತ್ತೆ ಜಲಾವೃತವಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುನ್ನೂರು ಗ್ರಾಮದ ಈ ವಿಠ್ಠಲ ದೇವಸ್ಥಾನ 1978ರಲ್ಲಿ ಹಿಡಕಲ್ ಜಲಾಶಯ ನಿರ್ಮಾಣವಾದ ಬಳಿಕ ನೀರಿನಲ್ಲೇ ಉಳಿದಿತ್ತು. ಗ್ರಾಮವನ್ನು ಸ್ಥಳಾಂತರ ಮಾಡಲಾಗಿದ್ದರೂ, ದೇವಸ್ಥಾನ ಮಾತ್ರ ಇಂದಿಗೂ ಅದೇ ಸ್ಥಳದಲ್ಲಿ ನಿಂತಿದೆ.
ಈ ವರ್ಷ ಹಿಡಕಲ್ ಜಲಾಶಯದ ನೀರಿನ ಮಟ್ಟ ಇಳಿಕೆಯಾಗಿದ್ದಾಗ ಈ ದೇವಸ್ಥಾನ ಮತ್ತೆ ಭಕ್ತರಿಗೆ ದರ್ಶನ ನೀಡಿತ್ತು. ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಇದೀಗ ಮಳೆ ಹೆಚ್ಚಾಗಿ ಜಲಾಶಯಕ್ಕೆ ನೀರಿನ ಹರಿವು ಜೋರಾಗಿರುವುದರಿಂದ ದೇವಸ್ಥಾನ ಮತ್ತೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ.
ವಿಶೇಷವೆಂದರೆ, ವರ್ಷಗಳ ಕಾಲ ನೀರಿನಲ್ಲೇ ಇದ್ದರೂ ದೇವಸ್ಥಾನದ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ. ಇದೇ ಕಾರಣಕ್ಕೆ ಈ ದೇವಾಲಯವನ್ನು ನೋಡಲು ಮತ್ತು ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಸದ್ಯ ಘಟಪ್ರಭಾ ನದಿಯ ನೀರಿನ ಹರಿವು ಹೆಚ್ಚಾಗುತ್ತಿದ್ದು, ಹಿಡಕಲ್ ಜಲಾಶಯವೂ ತುಂಬುತ್ತಿದೆ.
Laxmi News 24×7