ನವದೆಹಲಿ: ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು, ಯಾವುದಕ್ಕೂ ನಾನು ಹೆದರುವುದಿಲ್ಲ. ಇದೇ ಮುಂಬರುವ ಡಿಸೆಂಬರ್ನಲ್ಲಿ ನಾನು ನನ್ನ ಪಕ್ಷದ ಸಹೋದ್ಯೋಗಿಗಳೊಂದಿಗೆ ತಾಯ್ನಾಡಿಗೆ ಮರಳಲಿದ್ದೇನೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿಸದ್ಯ ತೀವ್ರ ರಾಜಕೀಯ ಬಿಕ್ಕಟ್ಟು ಹಾಗೂ ಅವರ ವಿರುದ್ಧ ಕಾನೂನು ಕ್ರಮಗಳ ತೂಗುಗತ್ತಿ ಇದ್ದಾಗಲೂ ಶೇಖ್ ಹಸೀನಾ ತಾಯ್ನಾಡಿಗೆ ಮರಳುವ ದೃಢ ನಿರ್ಧಾರ ಪ್ರಕಟಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶಕ್ಕೆ ಹೋದರೆ ನನ್ನನ್ನು ಜೈಲಿಗೆ ಹಾಕಬಹುದು ಅಥವಾ ಜೀವಕ್ಕೇ ಅಪಾಯ ಉಂಟಾಗಬಹುದು ಎಂಬ ಅರಿವು ನನಗಿದೆ. ಆದರೂ ನಾನು ಡಿಸೆಂಬರ್ನಲ್ಲಿ ಬಾಂಗ್ಲಾಕ್ಕೆ ಹೋಗುತ್ತೇನೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಪಕ್ಷವಾದ ‘ಅವಾಮಿ ಲೀಗ್’ನ ಪ್ರಮುಖ ನಾಯಕರು ಮತ್ತು ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ದೇಶಕ್ಕೆ ಮರಳುವುದಾಗಿ ಹೇಳಿರುವ ಅವರು, ಬಾಂಗ್ಲಾದೇಶದಲ್ಲಿ ಪ್ರಸ್ತುತ ಇರುವ ಮಧ್ಯಂತರ ಸರ್ಕಾರದ ವಿರುದ್ಧ ತಮ್ಮ ರಾಜಕೀಯ ಹೋರಾಟವನ್ನು ಮತ್ತೆ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ.
ನನ್ನ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನನ್ನ ಸಾವು ಬಂದರೆ ಅದು ನನ್ನ ಸ್ವಂತ ನೆಲದಲ್ಲಿ ಆಗಬೇಕು. ನನ್ನ ಹೆತ್ತವರನ್ನು ಸಮಾಧಿ ಮಾಡಿದ ಮತ್ತು ಅವರ ರಕ್ತ ಚೆಲ್ಲಿದ ಸ್ಥಳದಲ್ಲಿ ಬರಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ಉಗ್ರ ವಿದ್ಯಾರ್ಥಿ ದಂಗೆ ಮತ್ತು ಹಿಂಸಾಚಾರದ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಪ್ರಾಣಭಯದಿಂದ ಭಾರತಕ್ಕೆ ಪಲಾಯನ ಮಾಡಿದ್ದರು. ಅಂದಿನಿಂದ ಅವರು ಭಾರತದ ರಹಸ್ಯ ಸುರಕ್ಷಿತ ಸ್ಥಳದಲ್ಲೇ ಆಶ್ರಯ ಪಡೆದಿದ್ದಾರೆ.
ಬಾಂಗ್ಲಾದೇಶದ ಪ್ರಸ್ತುತ ಸರ್ಕಾರವು ಶೇಖ್ ಹಸೀನಾ ಅವರ ಹಸ್ತಾಂತರಕ್ಕೆ ಒತ್ತಾತ್ತಿರುವ ಬೆನ್ನಲ್ಲೇ, ಅವರು ಸ್ವತಃ ತಾವೇ ದೇಶಕ್ಕೆ ಮರಳುವುದಾಗಿ ಘೋಷಿಸಿರುವುದು ಮಧ್ಯಪ್ರಾಚ್ಯ ಹಾಗೂ ದಕ್ಷಿಣ ಏಷ್ಯಾ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
Laxmi News 24×7