ಬೆಳಗಾವಿ: ಭಾರೀ ಮಳೆಯ ಪರಿಣಾಮ ಕರ್ನಾಟಕಕ್ಕೆ ಹೊಂದಿಕೊಂಡಿರುವ ಅಂಬೋಲಿ ಫಾಲ್ಸ್ ಬಳಿ ಭಾರೀ ಪ್ರಮಾಣದ ಗುಡ್ಡ ಕುಸಿತವಾಗಿದೆ.
ಮಹಾರಾಷ್ಟ್ರದ ಸಾವಂತವಾಡಿ ತಾಲೂಕಿನಲ್ಲಿರುವ ಅಂಬೋಲಿ ಫಾಲ್ಸ್ ಬಳಿ ಘಟನೆ ನಡೆದಿದೆ. ತಡರಾತ್ರಿ ಗುಡ್ಡದ ಮೇಲಿಂದ ಬೃಹತ್ ಬಂಡೆಗಳು ರಸ್ತೆಗೆ ಉರುಳಿ ಬಿದ್ದಿದೆ. ರಸ್ತೆ ಮೇಲೆಯೇ ನಾಲ್ಕು ಬೃಹತ್ ಬಂಡೆಗಳು ಉರುಳಿ ಬಿದ್ದಿದ್ದು, ಭಾರೀ ಅನಾಹುತ ತಪ್ಪಿದೆ. ಘಟನೆಯ ಪರಿಣಾಮ ಮಧ್ಯರಾತ್ರಿ ಕೆಲಹೊತ್ತು ಬೆಳಗಾವಿ-ಸಿಂಧದುರ್ಗ ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿತ್ತು. ಮಧ್ಯರಾತ್ರಿಯಿಂದಲೇ ಚಂದಗಡ ಅಗ್ನಿಶಾಮಕ ಸಿಬ್ಬಂದಿ ಬಂಡೆಗಳ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಿಂಧದುರ್ಗ ಉಸ್ತುವಾರಿ ಸಚಿವ ನಿತೇಶ್ ರಾಣೆ ಸೂಚನೆ ಮೇರೆಗೆ ಬಂಡೆಗಳ ತೆರವು ಕಾರ್ಯ ನಡೆಯುತ್ತಿದೆ.
ಮಹಾರಾಷ್ಟ್ರ ಪೊಲೀಸರು ಒಂದು ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ವೀಕೆಂಡ್ ವೇಳೆ ಅಂಬೋಲಿ ಫಾಲ್ಸ್ ನೋಡಲು ಮೂರು ರಾಜ್ಯಗಳ ಪ್ರವಾಸಿಗರು ಬರುತ್ತಾರೆ. ಅಂಬೋಲಿ ಫಾಲ್ಸ್ ಕರ್ನಾಟಕ, ಮಹಾರಾಷ್ಟ್ರ, ಗೋವಾ ಪ್ರವಾಸಿಗರ ನೆಚ್ಚಿನ ತಾಣ ಆಗಿದೆ. ಬೆಳಗಾವಿಯ ಜಲಪಾತಗಳಿಗೆ ನಿರ್ಬಂಧ ಹಿನ್ನೆಲೆ ಅಂಬೋಲಿಗೆ ಪ್ರವಾಸಿಗರು ಲಗ್ಗೆಯಿಡುತ್ತಿದ್ದಾರೆ.
Laxmi News 24×7