ನವದೆಹಲಿ: ಉತ್ತರ ಪ್ರದೇಶ ರಾಜಕೀಯದಲ್ಲಿ ಇಂದು ಅತ್ಯಂತ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರನ್ನು ಭೇಟಿಯಾಗಲು ಲಕ್ನೋದ ಅವರ ನಿವಾಸಕ್ಕೆ ತೆರಳಿದ್ದ ಕಾಂಗ್ರೆಸ್ನ ಪ್ರಭಾವಿ ದಲಿತ ನಾಯಕರ ನಿಯೋಗಕ್ಕೆ ಭಾರಿ ಮುಖಭಂಗವಾಗಿದ್ದು ಭೇಟಿ ಸಿಗದೇ ಮನೆಯ ಗೇಟ್ನಿಂದಲೇ ವಾಪಸ್ ಬಂದಿದ್ದಾರೆ.
2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಒಂದು ವರ್ಷ ಬಾಕಿ ಇರುವಾಗ ನಡೆದಿರುವ ಈ ‘ದಿಢೀರ್’ ಭೇಟಿಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಸ್ವತಃ ಕಾಂಗ್ರೆಸ್ ಹೈಕಮಾಂಡ್ ಈ ನಾಯಕರಿಗೆ ಬಿಗ್ ಶಾಕ್ ನೀಡಿದೆ.
ಮೇ 19 ರ ಮಂಗಳವಾರ ಸಂಜೆ ಈ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ರಾಷ್ಟ್ರೀಯ ಪರಿಶಿಷ್ಟ ಜಾತಿ (SC) ವಿಭಾಗದ ಅಧ್ಯಕ್ಷ ರಾಜೇಂದ್ರ ಪಾಲ್ ಗೌತಮ್ ಮತ್ತು ಬಾರಾಬಂಕಿ ಕ್ಷೇತ್ರದ ಲೋಕಸಭಾ ಸಂಸದ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ತನುಜ್ ಪುನಿಯಾ ಅವರು ಯಾವುದೇ ಮುನ್ಸೂಚನೆ ಅಥವಾ ಪೂರ್ವ ಅನುಮತಿ ಇಲ್ಲದೆ ಲಕ್ನೋದಲ್ಲಿರುವ ಮಾಯಾವತಿ ಅವರ ನಿವಾಸಕ್ಕೆ ಭೇಟಿ ನೀಡಲು ಆಗಮಿಸಿದ್ದರು.
ಕಾಂಗ್ರೆಸ್ ನಾಯಕರು ಭೇಟಿಗೆ ವಿನಂತಿಸಿದಾಗ ಮಾಯಾವತಿ ಅವರ ಭದ್ರತಾ ಸಿಬ್ಬಂದಿ ಒಳಗೆ ಸಂದೇಶ ರವಾನಿಸಿದ್ದಾರೆ. ಆದರೆ, ತಕ್ಷಣವೇ ಭೇಟಿಗೆ ನಿರಾಕರಿಸಿದ ಮಾಯಾವತಿ, ಒಳಗೆ ಬರಲು ಅವಕಾಶ ನೀಡಲಿಲ್ಲ. ಇದರ ಪರಿಣಾಮವಾಗಿ ಕೈ ನಾಯಕರು ನಿರಾಶರಾಗಿ ಗೇಟ್ನಿಂದಲೇ ವಾಪಸ್ ಹಿಂದಿರುಗಬೇಕಾಯಿತು.
ಕಾರಣ ಕೇಳಿ ನೋಟಿಸ್
ಈ ಬೆಳವಣಿಗೆ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್ ಹೈಕಮಾಂಡ್ ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ದೂರ ಸರಿದಿದೆ. ಕಾಂಗ್ರೆಸ್ನ ಉತ್ತರ ಪ್ರದೇಶ ಉಸ್ತುವಾರಿ ಅವಿನಾಶ್ ಪಾಂಡೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಇದು ಪಕ್ಷದ ಅಧಿಕೃತ ನಿಯೋಗವಾಗಿರಲಿಲ್ಲ. ನಾಯಕರ ಈ ಶಿಸ್ತು ಉಲ್ಲಂಘನೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದೆ. ಹೈಕಮಾಂಡ್ ಅನುಮತಿ ಇಲ್ಲದೆ ಭೇಟಿಗೆ ಮುಂದಾದ ಇಬ್ಬರೂ ನಾಯಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜಕೀಯ ಉದ್ದೇಶವಿಲ್ಲ
ಸ್ವಪಕ್ಷದಿಂದಲೇ ನೋಟಿಸ್ ಜಾರಿಯಾಗುತ್ತಿದ್ದಂತೆ ಗಲಿಬಿಲಿಗೊಂಡ ತನುಜ್ ಪುನಿಯಾ ಮತ್ತು ರಾಜೇಂದ್ರ ಪಾಲ್ ಗೌತಮ್ ಜಂಟಿ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ. ಮಾಯಾವತಿ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ, ಕೇವಲ ಅವರ ಆರೋಗ್ಯ ವಿಚಾರಿಸಲು ಹೋದ ಸೌಜನ್ಯದ ಭೇಟಿಯಾಗಿತ್ತು ಅಷ್ಟೇ. ನಾವು ರಾಹುಲ್ ಗಾಂಧಿ ಅವರ ಯಾವುದೇ ಸಂದೇಶವನ್ನು ಹೊತ್ತು ಅಲ್ಲಿಗೆ ಹೋಗಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
Laxmi News 24×7