ರಾಜ್ಯದಲ್ಲಿಯೇ ಅತಿಹೆಚ್ಚು ಠೇವಣಿ ಹೊಂದಿರುವ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಟ್ಟಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಬಿಡಿಸಿಸಿ) ಪ್ರಸಕ್ತ ಸಾಲಿನಲ್ಲಿ 56.25 ಕೋಟಿ ರೂ. ನಿವ್ವಳ ಲಾಭ ಹೊಂದಿದೆ ಎಂದು ಅಧ್ಯಕ್ಷ ಅಣ್ಣಾಸಾಹೇಬ ಜೋಲ್ಲೆ ತಿಳಿಸಿದರು.
ನಗರದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗಳಲ್ಲಿ ಅತಿ ಹೆಚ್ಚು ಬೆಳೆಸಾಲ ವಿತರಿಸಿದ ಬ್ಯಾಂಕ್ ನಮ್ಮದಾಗಿದೆ. 2025-26ನೇ ಸಾಲಿನಲ್ಲಿ ಜಿಲ್ಲೆಯ 4.77 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3,818.79 ಕೋಟಿ ರೂ. ಬೆಳೆಸಾಲ ವಿತರಿಸಲಾಗಿದೆ. ಅಲ್ಲದೆ, 444 ಜನ ರೈತರಿಗೆ 24.52ಕೋಟಿ ರೂ. ವೆಚ್ಚದಲ್ಲಿ ಟ್ರಾೃಕ್ಟರ್, ಪೈಪಲೈನ್ ಸಾಲ ನೀಡಲಾಗಿದೆ ಎಂದರು.
ರೈತರ, ಗ್ರಾಹಕರ ಸ್ನೇಹಿಯಾಗಿರುವ ಜಿಲ್ಲಾ ಸಹಕಾರಿ ಬ್ಯಾಂಕವು ವರ್ಷದಿಂದ ವರ್ಷಕ್ಕೆ ತನ್ನ ಆರ್ಥಿಕ ವಹಿವಾಟಿನ ಕ್ಷೇತ್ರವನ್ನ ವಿಸ್ತರಿಸಿಕೊಳ್ಳುತ್ತಿದೆ.ಪ್ರಸಕ್ತ ಸಾಲಿನಲ್ಲಿ 9,776 ಕೋಟಿ ರೂ.ದುಡಿಯುವ ಬಂಡವಾಳ, 6,703.35 ಕೋಟಿ ರೂ. ಠೇವಣಿ ಹೊಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 616.30 ಕೋಟಿ ರೂ. ಠೇವಣಿ ಹೆಚ್ಚಳವಾಗಿದೆ. 165ಸಂಘಗಳಿಗೆ 22.89 ಕೋಟಿ ರೂ. ಗೋಡಾವುನ ಸಾಲ,ದ್ವಿಚಕ್ರ, ಕಾರ,ಜೆಸಿಬಿ, ಟ್ರಕ್,ವಾಣಿಜ್ಯ ಬಾಡಿಗೆ ವಾಹನ, ಮನೆ ಕಟ್ಟಲು, ವೈಯಕ್ತಿಕ ಸಾಲ ಸೇರಿ ಕೃಷಿಯೇತರ 160.28 ಕೋಟಿ ರೂ.ಸಾಲ ಹಾಗೂ ಚಿನ್ನಾಭರಣ ಅಡುವಿನ ಮೇಲೆ 173.36 ಕೋಟಿ ರೂ. ಸಾಲ ಸೇರಿ ಒಟ್ಟು 6,738.19 ಕೋಟಿ ರೂ. ಸಾಲ ನೀಡಲಾಗಿದೆ. 335 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. ಒಟ್ಟಿನಲ್ಲಿ ಬ್ಯಾಂಕವು 2025-26ನೇ ಸಾಲಿನಲ್ಲಿ 13,441 ಕೋಟಿ ರೂ. ಆರ್ಥಿಕ ವಹಿವಾಟು ನಡೆಸಿದೆ ಎಂದು ವಿವರಿಸಿದರು.
ರಾಜ್ಯದಲ್ಲಿಯೇ ಪ್ರಥಮವಾಗಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಸಿಬ್ಬಂದಿಗೆ 1 ಲಕ್ಷ ರೂ. ಆರೋಗ್ಯ ವಿಮೆ, 5ಲಕ್ಷ ರೂ. ಜೀವವಿಮೆ ಹಾಗೂ 10 ಲಕ್ಷ ರೂ. ಅಪಘಾತ ವಿಮೆ ಸೌಲಭ್ಯ ಒದಗಿಸಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯು ಬ್ಯಾಂಕಿ ಸಿಬ್ಬಂದಿ ಶೇ. 20.79 ಬೋನಸ್ ನೀಡಲಾಗುತ್ತಿದೆ. ಬ್ಯಾಂಕಿನ ಎಲ್ಲ ಶಾಖೆಗಳಿಗೆ ಎಟಿಎಂ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಬ್ಯಾಂಕಿನ ನಿರ್ದೇಶಕರಾದ ಅಪ್ಪಾಸಾಹೇಬ ಕುಲಗುಡೆ, ನೀಲಕಂಠ ಕಪ್ಪಲಗುದ್ದಿ, ವಿರೂಪಾಕ್ಷ ಮಾಮನಿ, ನಾನಾಸಾಹೇಬ ಪಾಟೀಲ, ಸಿಇಒ ಎನ್.ಜಿ.ಕಲಾವಂತ ಇತರರಿದ್ದರು.
.
Laxmi News 24×7