ಅಥಣಿ ಗ್ರಾಮೀಣ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ರಸ್ತೆ, ನೀರಾವರಿ, ಶಾಲಾ ಕೊಠಡಿ ಸೇರಿದಂತೆ ಹಲವು ಕಾಮಗಾರಿ ಕೈಗೊಂಡು ಹಿಂದುಳಿದವರು, ರೈತರು, ಕೂಲಿ ಕಾರ್ಮಿಕರ ಏಳಿಗೆಗೆ ಶ್ರಮಿಸುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಅಬ್ಬಿಹಾಳ ಗ್ರಾಮದ ಬಳಿ ೩.೬೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಖಿಳೇಗಾಂವ ಅಥಣಿ, ಸತ್ತಿ ರಾಜ್ಯ ಹೆದ್ದಾರಿ ಡಾಂಬರೀಕರಣ ಹಾಗೂ ೩ ಕೋಟಿ ರೂ. ವೆಚ್ಚದಲ್ಲಿ ದರೂರ ಗ್ರಾಮದಿಂದ ಖವಟಕೊಪ್ಪ ಗ್ರಾಮದ ಸಂಪರ್ಕ ರಸ್ತೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಸರ್ಕಾರದಿಂದ ಅನುದಾನ ತಂದು ಅಥಣಿ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ರಸ್ತೆ, ನೀರಾವರಿ, ಕುಡಿಯುವ ನೀರು, ಸಮುದಾಯ ಭವನ ಸೇರಿದಂತೆ ಮೂಲ ಸೌಕರ್ಯ ಒದಗಿಸಿ ಅಥಣಿ ಕ್ಷೇತ್ರವನ್ನು ಮಾದರಿಯನ್ನಾಗಿಸಿದೆ ಎಂದರು.
ಮುಖಂಡ ಸುರೇಶ ಮಾಯಣ್ಣವರ ಮಾತನಾಡಿ, ಕೃಷ್ಣಾ ನದಿ ದಡದ ಗ್ರಾಮಗಳ ಪುನರ್ವಸತಿ ಕೇಂದ್ರದ ಮನೆಗಳ ಹಕ್ಕುಪತ್ರ ವಿತರಣೆಗೆ ಹಾಗೂ ಸವಳು-ಜವಳು ಭೂಮಿ ನಿರ್ಮೂಲನೆಗೆ ಶಾಸಕ ಸವದಿ ಪಣ ತೊಟ್ಟಿದ್ದಾರೆ ಎಂದರು.
ಪಿಡಬ್ಲ್ಯುಡಿ ಅಧಿಕಾರಿ ಮಲ್ಲಿಕಾರ್ಜುನ ಮಗದುಮ್ಮ, ಜಿಪಂ ಮಾಜಿ ಸದಸ್ಯ ವಿನಾಯಕ ಬಾಗಡಿ, ಸಾತಗೊಂಡ ಪಾಟೀಲ, ರಾಮಪ್ಪ ಗುಡದಿನ್ನಿ, ಅಣ್ಣಾಸಾಬ ಚೌಗಲಾ, ಮಹಾದೇವ ಬಸಗೌಡರ, ಮಹೇಶ ಚೌಗಲಾ, ರಾಜು ಅಲಬಾಳ, ದುಂಡಪ್ಪ ಪಡಸಲಗಿ, ಮಹೇಶ ಬೇನಾಡಿ, ಗುರುಲಿಂಗ ಗುಮತಾಜ, ಜಗದೀಶ ದಳವಾಯಿ, ಶ್ರೀಕಾಂತ ಅಸ್ಕಿ ಇತರರಿದ್ದರು.
Laxmi News 24×7