ಬಾಗಲಕೋಟೆ: ಬಂಜಾರಾ ಸಮುದಾಯಕ್ಕೆ ಕಾಂಗ್ರೆಸ್ ಮಾಡಿದ ಮೋಸ ಮತ್ತು ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಅರ್ಥವಾಗಿವೆ. ಮುಂದಿನ ಭವಿಷ್ಯಕ್ಕಾಗಿ ಎಸ್.ಸಿ ಎಸ್.ಟಿ ಪಂಗಡಗಳಿಗೆ ಬಹುದೊಡ್ಡ ಪೆಟ್ಟು ಕೊಟ್ಟ ಕಾಂಗ್ರೆಸ್ ಸೋಲಿಸಿ ಬಿಜೆಪಿಯನ್ನು 30 ಸಾವಿರಗಳ ಅಂತರದಲ್ಲಿ ಗೆಲ್ಲಸಲಿದ್ದಾರೆ ಎಂದು ಕುಡಚಿ ಶಾಸಕ ಪಿ.ರಾಜೀವ ಹೇಳಿದರು.
ಉಪಚುನಾವಣೆ ಹಿನ್ನೆಲೆ ನೀರಲಕೇರೆ ತಾಂಡಾದಲ್ಲಿ ಮತಯಾಚನೆ ಸಂದರ್ಭದಲ್ಲಿ ತುಂತುರು ಮಳೆಯ ನಡುವೆಯೂ ಬಸವಣ್ಣನ ಗುಡಿಯಿಂದ ಮಾರುತೇಶ್ವರ ದೇವಸ್ಥಾನ ಮಾರ್ಗವಾಗಿ ದುರ್ಗಾ ದೇವಸ್ಥಾನದವರೆಗೂ ಬೃಹತ್ ಪಾದಯಾತ್ರೆ ಮಾಡಲಾಯಿತು. ಪಾದಯಾತ್ರೆಯ ಉದ್ದಕ್ಕೂ ಬಂಜಾರಾ ಸಮುದಾಯದ ಮತದಾರರು ಲಂಬಾಣಿ ಗೀತೆ ಮತ್ತು ನೃತ್ಯ ಮಾಡಿ ಪಟಾಕಿ ಸಿಡಿಸಿ ಹೂಮಳೆ ಗೈಯುವುದರ ಮೂಲಕ ಭಾರಿ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಚುನಾವಣೆಯು ನಮ್ಮ ಸಮಾಜದ ಭವಿಷ್ಯದ ಚುನಾವಣೆ ಆಗಿದ್ದು ಬಿಜೆಪಿ ಗೆಲ್ಲಿಸಿ ಕಾಂಗ್ರೆಸ್ ಸರಕಾರಕ್ಕೆ ಸಮಾಜದ ಶಕ್ತಿಯನ್ನು ತೋರಿಸಬೇಕಿದೆ.
ದಲಿತರಿಗಾಗಿ ಬಿಜೆಪಿ ಹೆಚ್ಚಿಸಿದ ಮೀಸಲಾತಿಯನ್ನು ಕಾಂಗ್ರೆಸ್ ಮತ್ತೆ ರದ್ದುಮಾಡಿ ಮೋಸ ಮಾಡಿದೆ. ನ್ಯಾಯಾಲಯದಲ್ಲಿ ಮೀಸಲಾತಿ ಬಗ್ಗೆ ಸೂಕ್ತ ವಾದಮಾಡುವಲ್ಲಿ ಸರಕಾರ ವಿಫಲವಾಗಿದೆ. ಇದು ಬಂಜಾರಾ ಸಮುದಾಯಕ್ಕೆ ಕೊಟ್ಟ ದೊಡ್ಡ ಕೊಡಲಿ ಏಟು. ಇನ್ನು ಬಾಗಲಕೋಟೆಯಲ್ಲಿ ಒಂದೇ ಒಂದು ಕಾಮಗಾರಿಯಾಗಿಲ್ಲ. ಚರಂತಿಮಠ ಅವರ ಆಡಳಿತಾವದಿಯಲ್ಲಿ ಜಾರಿಯಾದ ಮಂಜುರಾತಿಗಳು ಇನ್ನೂ ನಡೆಯುತ್ತಿವೆ. ಅವುಗಳನ್ನೇ ಪೂರ್ಣಗೊಳಿಸುವ ಸಾಮರ್ಥ್ಯ ಸರಕಾರಕ್ಕೆ ಇಲ್ಲ. ಗ್ರಾ.ಪಂಗಳಲ್ಲಿ ಮೂರು ಬಜೆಟ್ ಮಂಡಿಸಿದರೂ ಒಂದು ಮನೆ ನೀಡಿಲ್ಲ ಇದಕ್ಕೆಲ್ಲ ತಕ್ಕ ಉತ್ತರವಾಗಿ 30 ಸಾವಿರ ಮತಗಳ ಅಂತರದಲ್ಲಿ ವೀರಣ್ಣ ಚರಂತಿಮಠರನ್ನು ಗೆಲ್ಲಿಸುವ ಕೆಲಸವನ್ನು ಮಾಡಬೇಕು ಎಂದರು.
ವೀರಣ್ಣ ಚರಂತಿಮಠರು ಮಾತನಾಡಿ ಬಿಜೆಪಿಯು ಹಿಂದೂಪರ ಸರಕಾರವಾಗಿದೆ. ನಿಮಗೆ ಅನ್ಯಾಯವಾದರೆ ನಿಮ್ಮ ಜೊತೆಗೆ ನಾವಿರುತ್ತೇವೆ ಹೊರತು ಕೇವಲ ಪ್ರಚಾರಕ್ಕೆ ಬರುವ ಸಿದ್ದರಾಮಯ್ಯ ಅಲ್ಲ. ಅವರ ಅಪಪ್ರಚಾರದಿಂದ ದಲಿತ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ಉಪಚುನಾವಣೆ ಮುಗಿದ ನಂತರ ಕುರ್ಚಿ ಜಗಳದಿಂದಲೇ ಕಾಂಗ್ರೆಸ್ ಪತನವಾಗಲಿದೆ. ಆ ಪಕ್ಷದಲ್ಲಿ ನೀತಿಯೂ ಇಲ್ಲ ನೇತಾರನೂ ಇಲ್ಲ. ಶಿರೂರು, ಭಗವತಿಗೆ ನೀರಾವರಿ, ಬೆಟ್ಟ ಕೊರೆದು ಹೈಸ್ಕೂಲ್ ನಿರ್ಮಾಣ ಮಾಡಿರುವುದು, ದುರ್ಗಾ ಬಿಜೆಪಿ ಆಡಳಿತದಲ್ಲಿ. ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದೇ ಹೊರತು ಯಾರ ಅಭಿವೃದ್ಧಿಯೂ ಆಗಿಲ್ಲ ಎಂದರು.
ಇದೇ ವೇಳೆ ವೈದ್ಯರಾದ ಕಾಶಿನಾಥ ಪೂಜಾರಿ, ರಮೇಶ ಕಟ್ಟಿಮಣಿ, ಡಾ. ಅವಿನಾಶ್ ಕಟ್ಟಿಮಣಿ, ಆನಂದ ಕಟ್ಟಿಮನಿ, ಪುಂಡಲೀಕ ಕಟ್ಟಿಮಣಿ ಕಾಂಗ್ರೆಸ್ ತೊರೆದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು.
ಮತಯಾಚನೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ರಂಗನಗನಗೌಡ ಗೌಡರ, ಬಲರಾಮ ನಾಯಕ್ ಸೇರಿದಂತೆ ತಾಂಡಾದ ಮುಖಂಡರು ಪಾಲ್ಗೊಂಡಿದ್ದರು.
Laxmi News 24×7