ಧಾರವಾಡ: ಧಾರವಾಡ ಹೈಕೋರ್ಟ್ಗೆ ಬಾಂಬ್ ಇಟ್ಟಿರುವುದಾಗಿ ಅಡಿಷನಲ್ ಜನರಲ್ ಅವರ ಇಮೇಲ್ಗೆ ಬೆದರಿಕೆ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿದೆ.
ಈ ಹಿನ್ನೆಲೆ ಅಲರ್ಟ್ ಆಗಿರುವ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ನೇತೃತ್ವದಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ. ಕೋರ್ಟ್ ಹಾಲ್ನಿಂದ ನ್ಯಾಯಮೂರ್ತಿಗಳು, ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರನ್ನು ಹೊರಹಾಕಿ ಬಾಂಬ್ ನಿಷ್ಕ್ರೀಯ ದಳದಿಂದ ತಪಾಸಣೆ ನಡೆಸಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿದ್ದು, ಇ – ಮೇಲ್ ಮುಖಾಂತರ ಮಾಹಿತಿ ಬಂದಿದೆ. ಕೂಡಲೇ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ. ಹೈಕೋರ್ಟ್ ಅಂದರೆ ಸಹಜವಾಗಿ ಬಿಗಿ ಭದ್ರತೆ ಇರುತ್ತದೆ. ಮುಂಚೆಯಿಂದಲೂ ಸಾಕಷ್ಟು ಭದ್ರತೆ ಇರುತ್ತದೆ. ಇದೀಗ ಎಲ್ಲ ತಂಡಗಳು ಬಂದಿವೆ. ಎಲ್ಲರನ್ನೂ ನಾವು ಹೊರಗೆ ಕಳಿಸಿದ್ದೇವೆ. ಬೇರೆ ಯಾವುದೋ ವಿಷಯ ಡೈವರ್ಟ್ ಮಾಡಲು ಇಂತಹ ಸಂದೇಶ ಬಂದಿರಬಹುದು. ಬೇರೆ ರಾಜ್ಯದಿಂದ ಬಂದಿರೋ ಸಾಧ್ಯತೆ ಇದೆ. ತನಿಖೆಯಿಂದಷ್ಟೇ ಎಲ್ಲವೂ ಹೊರ ಬರಲಿದೆ. ಈಗಾಗಲೇ ನಾವು ತೀವ್ರ ತಪಾಸಣೆ ಮಾಡಿದ್ದೇವೆ’ ಎಂದಿದ್ದಾರೆ.
ಈ ಕುರಿತು ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ. ಡಿ. ಹಿರೇಮಠ ಅವರು ಮಾತನಾಡಿದ್ದು, ‘ನಾವು, ರಿಜಿಸ್ಟ್ರಾರ್, ಪೊಲೀಸ್ ಅಧಿಕಾರಿಗಳು ಚರ್ಚೆ ಮಾಡಿದೆವು. ಹೈಕೋರ್ಟ್ಗೆ ಬಾಂಬ್ ಇಟ್ಟಿರೋದಾಗಿ ಮೇಲ್ ಬಂದಿರುವುದಾಗಿ ಹೇಳಿದರು. ಕೂಡಲೇ ಎಚ್ಚೆತ್ತುಕೊಂಡು ಪೊಲೀಸರು ಎಲ್ಲರನ್ನೂ ಹೊರಗೆ ಕಳುಹಿಸಿದರು. ಕಕ್ಷಿದಾರರು ಕೂಡ ಹೊರಗೆ ಹೋದರು. ಪೊಲೀಸರು ಮುತವರ್ಜಿಯಿಂದ ಕೆಲಸ ಮಾಡಿದರು’ ಎಂದು ತಿಳಿಸಿದ್ದಾರೆ.
ಜನರು ಸಾವು ಎಂದಾಗ ಹೆದರುತ್ತಾರೆ. ಇಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಅವಶ್ಯಕತೆ ಇದೆ. ಆದರೆ, ಅಷ್ಟು ಸಿಬ್ಬಂದಿ ಇಲ್ಲಿ ಇಲ್ಲ. ಸರ್ಕಾರ ಎಚ್ಚೆತ್ತುಕೊಳ್ಳಬೇಕು. ನಾವು ಸಿಎಂ, ಗೃಹಮಂತ್ರಿಗೆ ವಿನಂತಿ ಮಾಡಿಕೊಳ್ಳುತ್ತೇವೆ. ಹೆಚ್ಚಿನ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.
Laxmi News 24×7