ಬೆಂಗಳೂರು: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಅನ್ಯ ಕೋಮಿನ ಕೆಲವು ಯುವಕರು ಕಲ್ಲೆಸೆದಿರುವ ಘಟನೆ ತಡರಾತ್ರಿ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಎಸ್.ಗಾರ್ಡನ್ನಲ್ಲಿ ನಡೆದಿದೆ.
ಕಿಡಿಗೇಡಿಗಳ ಕೃತ್ಯದಿಂದ ಓಂ ಶಕ್ತಿ ಮಾಲಾಧಾರಿ ಓರ್ವ ಹುಡುಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವರ ಉತ್ಸವದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಸಂಘಟನೆಗಳು, ಜೆ.ಜೆ.ನಗರ ಠಾಣೆ ಮಂದೆ ಸೇರಿ ಕಲ್ಲು ತೂರಿದವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಓಂ ಶಕ್ತಿ ದೇವಿಯ ಉತ್ಸವ ನಡೆಯುತ್ತಿದ್ದು, ದೇವಿಯ ತೇರು ಎಳೆಯುವಾಗ ಅನ್ಯಕೋಮಿನ ಯುವಕರು ಕಲ್ಲು ತೂರಿದ್ದಾರೆ. ಈ ಹಿಂದೆಯೂ ಬೆಂಕಿ ಹಚ್ಚುವಂಥ ಕೃತ್ಯಗಳು ನಡೆದಿದ್ದವು ಎಂದು ಓಂ ಶಕ್ತಿ ಮಾಲಾಧಾರಿಗಳು ಹೇಳಿದ್ದಾರೆ.
ಘಟನೆ ವಿಕೋಪಕ್ಕೆ ತಿರುಗುವ ಮುನ್ಸೂಚನೆ ಸಿಗುತ್ತಿದ್ದಂತೆ ಜೆ.ಜೆ.ನಗರ ಪೊಲೀಸ್ ಠಾಣೆಗೆ ಎಸಿಪಿ ಭರತ್ ರೆಡ್ಡಿ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ.
ಸ್ಥಳೀಯ ನಿವಾಸಿ ಶಶಿಕುಮಾರ್ ಎನ್. ಅವರು ಪ್ರತಿಕ್ರಿಯಿಸಿ, “ಕಳೆದ ಸುಮಾರು 23 ವರ್ಷಗಳಿಂದ ಇಲ್ಲಿ ಓಂಶಕ್ತಿ ಮಾಲೆ ಮತ್ತು ಇರುಮುಡಿ ಕಟ್ಟಿಕೊಂಡು ಶ್ರದ್ಧಾಭಕ್ತಿಯಿಂದ ಪೂಜೆ ಮಾಡಲಾಗುತ್ತಿದೆ. ನಿನ್ನೆ ರಾತ್ರಿ ಸುಮಾರು 08:15 ಗಂಟೆಯಿಂದ 09:00 ಗಂಟೆಯ ಸುಮಾರಿಗೆ ಪಂಚಮುಖಿ ನಾಗದೇವತಾ ದೇವಾಸ್ಥಾನದ ಬಳಿ ಭಕ್ತರು ಮೆರವಣಿಗೆ ಹೋಗುತ್ತಿದ್ದಾಗ ಅನ್ಯಕೋಮಿನ ಮುರ್ನಾಲ್ಕು ಯುವಕರು ಕಲ್ಲು ತೂರಾಟ ಮಾಡಿದ್ದಾರೆ. ಮೆರವಣಿಗೆಯಲ್ಲಿ ಸಾಗುತ್ತಿದ್ದ ಒಬ್ಬ ಹೆಣ್ಣು ಮಗಳ ತಲೆಗೆ ಕಲ್ಲು ಬಿದ್ದು ಬಲವಾದ ಗಾಯವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿದ್ದೇವೆ. ಈ ರೀತಿಯ ಘಟನೆಗಳು ಈ ಹಿಂದಿನಿಂದಲೂ ನಡೆಯತ್ತಿವೆ. ಈ ಹಿಂದೆ ಇದೇ ರೀತಿ ಎರಡು ಮೂರು ಬಾರಿ ಧಾರ್ಮಿಕ ಆಚರಣೆಯ ವೇಳೆ ಬೆಂಕಿ ಹಾಕಿದ್ದಾರೆ. ಇಲ್ಲಿ ದಲಿತರು ಹೆಚ್ಚು ಇರುವ ಕಾರಣ ದೌರ್ಜನ್ಯ ನಡೆಯುತ್ತಿದೆ. ಹಿಂದೂ ಭಾವನೆಗಳಿಗೆ ಹಾಗೂ ದಲಿತರಿಗೆ ದೌರ್ಜನ್ಯ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಓಂ ಶಕ್ತಿ ಭಕ್ತಾಧಿಕಗಳು, ಅಯ್ಯಪ್ಪ ಸ್ವಾಮಿ ಭಕ್ತಾಧಿಗಳು ಮನವಿ ಮಾಡಿಕೊಳ್ಳುತ್ತಿದ್ದೇವೆ” ಎಂದು ತಿಳಿಸಿದರು.
Laxmi News 24×7