ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಪ್ರಸಿದ್ಧಿಯ ಗವಿಸಿದ್ದೇಶ್ವರ ಮಹಾ ರಥೋತ್ಸವ ನಾಳೆ (ಸೋಮವಾರ) ಸಂಜೆ 5:30 ಗಂಟೆಗೆ ಆರಂಭವಾಗಲಿದ್ದು, ಇಡೀ ಕೊಪ್ಪಳ ನಗರಿ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಮೇಘಾಲಯ ರಾಜ್ಯಪಾಲರಿಂದ ಚಾಲನೆ: ಮಹಾರಥೋತ್ಸವಕ್ಕೆ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಚಾಲನೆ ನೀಡಲಿದ್ದಾರೆ. ಮಹಾರಥೋತ್ಸವದ ನಂತರ ಮಠದ ಕೈಲಾಸ ಮಂಟಪದಲ್ಲಿ ನಡೆಯುವ ಭಕ್ತ ಹಿತಚಿಂತನಾ ಸಭೆಯಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಹಾಸಂಸ್ಥಾನ ಮಠದ ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕಾಗಿನೆಲೆಯ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕಾಖಂಡಕಿ ಗುರುದೇವಾಶ್ರಮದ ಯೋಗೀಶ್ವರ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ.
ಶಿವಮೊಗ್ಗದ ಹಿಂದುಸ್ತಾನಿ ಗಾಯಕರಾದ ವಿದ್ವಾನ್ ನೌಶಾದ್ ಹಾಗೂ ವಿದ್ವಾನ್ ನಿಶಾದ್ ಹರ್ಲಾಪುರ್ ಅವರಿಂದ ಸ್ವರಸಂಧ್ಯಾ ಜುಗಲ್ಬಂದಿ ಸಂಗೀತ ಕಾರ್ಯಕ್ರಮ ಹಾಗೂ ಗಂಗಾವತಿಯ ನರಸಿಂಹ ಜೋಶಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಭಕ್ತರಿಗೆ ಭಕ್ಷ್ಯ ಭೋಜನ: ಸತತ 15 ದಿನಗಳ ಕಾಲ ಮಹಾದಾಸೋಹ ನಡೆಯುವುದು ಜಾತ್ರೆಯ ವಿಶೇಷ. ಈ ವರ್ಷದ ಜಾತ್ರೆಯಲ್ಲಿ ಮೊದಲ ದಿನದ ಪ್ರಸಾದದಲ್ಲಿ ಭಕ್ತರು ಬೆಲ್ಲದ ಜಿಲೇಬಿ ಸವಿಯಲಿದ್ದಾರೆ. ಎರಡನೇ ದಿನ ಮಿರ್ಚಿ, ರವೆ ಉಂಡಿ, ಶೆಂಗಾ ಹೋಳಿಗೆ ಸೇರಿದಂತೆ ಇನ್ನಿತರ ಸಿಹಿ ಉಣಬಡಿಸಲಾಗುತ್ತದೆ. ಮಹಾ ದಾಸೋಹಕ್ಕೆ ತಿಂಗಳ ಹಿಂದಿನಿಂದಲೇ ಸುತ್ತಮುತ್ತಲ ಗ್ರಾಮದ ಜನರು ಹೋಳಿಗೆ, ತುಪ್ಪ, ರೊಟ್ಟಿ, ಚಟ್ನಿ, ಕಾಯಿಪಲ್ಯಗಳನ್ನು ತಂದು ಮಠಕ್ಕೆ ಅರ್ಪಿಸುವುದು ವಾಡಿಕೆ.

ಭಕ್ತ ಹಿತ ಚಿಂತನ ಸಭೆ: ಮೂರು ದಿನಗಳ ಮಹೋತ್ಸವದ ನಿಮಿತ್ತ ಗುಡ್ಡದ ಮೇಲೆ ನಿರ್ಮಿಸಿರುವ ಕೈಲಾಸ ಮಂಟಪದಲ್ಲಿ ಭಕ್ತ ಹಿತ ಚಿಂತನ ಸಭೆ ಜರುಗುವುದು. ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವಿದ್ವಾಂಸರು, ಸಾಧನ ಪುರುಷರು ಆಗಮಿಸಿ ಉಪದೇಶ ನೀಡಲಿದ್ದಾರೆ.
Laxmi News 24×7