ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ನಡುವಿನ ಸಂಘರ್ಷ ತಾರಕಕ್ಕೇರಿದೆ.
ಆಪ್ತ ಮಹೇಶ್ ಕುಮಟಳ್ಳಿಗೆ ಸ್ಥಾನ ಕಲ್ಪಿಸಲು ರಮೇಶ್ ಜಾರಕಿಹೊಳಿ ಶತಪ್ರಯತ್ನ
ಪಟ್ಟು ಸಡಿಲಿಸದ ರಮೇಶ್ ಜಾರಕಿಹೊಳಿ ಮಹೇಶ್ಕುಮಟಳ್ಳಿ, ಶ್ರೀಮಂತ ಪಾಟೀಲ್ಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು, ನೀವು ಉಪಚುನಾವಣೆಯಲ್ಲಿ ಇದೇ ಮಾತನ್ನು ಹೇಳಿದ್ದೀರಿ, ಈಗ ಕೊಟ್ಟ ಮಾತಿನಿಂದ ಹಿಂದೆ ಸರಿದರೆ ಅನ್ಯಾಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು,ಫೆ.3- ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮುಹೂರ್ತ ನಿಗದಿಪಡಿಸಿರುವ ಬೆನ್ನಲ್ಲೇ ಸಂಪುಟಕ್ಕೆ ಸೇರ್ಪಡೆಯಾಗಲು ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ನಡುವಿನ ಸಂಘರ್ಷ ತಾರಕಕ್ಕೇರಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿಗಳು 10+3 ಆಧಾರದಲ್ಲಿ ಸಂಪುಟಕ್ಕೆ ಸೇರ್ಪಡೆ ಮಾಡುವುದಾಗಿ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಈ ಸಂಘರ್ಷ ಮತ್ತೆ ಮುನ್ನಲೆಗೆ ಬಂದಿದೆ.
ಶತಾಯಗತಾಯ ಈ ಬಾರಿ ಸಂಪುಟಕ್ಕೆ ಸೇರ್ಪಡೆಯಾಗಲೇ ಬೇಕೆಂದು ಮೂಲ ಬಿಜೆಪಿಗರು ಪಟ್ಟು ಹಿಡಿದಿದ್ದರೆ, ತಮ್ಮಿಂದಲೇ ಸರ್ಕಾರ ರಚನೆಯಾಗಿದೆ ಎಂದು ಹೇಳುತ್ತಿರುವ ವಲಸಿಗರು ಕೂಡ ಮಂತ್ರಿ ಸ್ಥಾನಕ್ಕೆ ಕಣ್ಣಿಟ್ಟಿರುವುದು ಸಿಎಂಗೆ ತಲೆನೋವಾಗಿ ಪರಿಣಮಿಸಿದೆ. ಗುರುವಾರ 10.30ಕ್ಕೆ 13 ಮಂದಿ ಸಚಿವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಬಿಎಸ್ವೈ ಮುಂದಾಗಿದ್ದಾರೆ. ಕಳೆದ ರಾತ್ರಿಯಿಂದ ಬಿಜೆಪಿಯಲ್ಲಿ ಬಿರುಸಿನ ರಾಜಕೀಯ ವಿದ್ಯಮಾನಗಳು ನಡೆಯುತ್ತಿದ್ದು, ವಲಸಿಗರಿಗೆ ಮಣೆ ಹಾಕುತ್ತಿರುವ ಸಿಎಂ ವಿರುದ್ಧ ಪಕ್ಷ ನಿಷ್ಠರು ಮುನಿಸಿಕೊಂಡಿದ್ದಾರೆ.
ಒಂದೆಡೆ ತಮ್ಮ ಆಪ್ತ ಮಹೇಶ್ ಕುಮಟಳ್ಳಿಗೆ ಸ್ಥಾನ ಕಲ್ಪಿಸಲು ರಮೇಶ್ ಜಾರಕಿಹೊಳಿ ಶತಪ್ರಯತ್ನ ನಡೆಸುತ್ತಿದ್ದರೆ ಹೆಚ್ಚು ಬಾರಿ ಗೆದ್ದಿರುವ ಶಾಸಕರು ತಾವೇಕೆ ಸಚಿವರಾಗಬಾರದು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಚಿತ್ರದುರ್ಗದ ತಿಪ್ಪಾರೆಡ್ಡಿ, ಹಾವೇರಿಯ ನೆಹರು ಓಲೆಕಾರ್, ಕುಂದಾಪುರದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಸುಳ್ಯದ ಎಸ್. ಅಂಗಾರ, ವಿರಾಜಪೇಟೆಯ ಕೆ.ಜಿ.ಬೋಪಯ್ಯ, ಚಾಮರಾಜ ಕ್ಷೇತ್ರದ ಎಸ್.ಎ.ರಾಮದಾಸ್, ಹರಪನಹಳ್ಳಿಯ ಕರುಣಾಕರ ರೆಡ್ಡಿ, ದಾವಣಗೆರೆ ಉತ್ತರದ ಎಸ್.ಎ.ರವೀಂದ್ರನಾಥ್, ಹೊಸದುರ್ಗದ ಗೂಳಿಹಟ್ಟಿ ಶೇಖರ್, ಹಿರಿಯೂರಿನ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಸಂಪುಟಕ್ಕೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.
ನಿನ್ನೆ ರಾತ್ರಿ ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾಗಿ ಕೊಟ್ಟ ಮಾತಿನಂತೆ ಮಹೇಶ್ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡಬೇಕು, ನನಗೆ ಉಪಮುಖ್ಯಮಂತ್ರಿ ಸ್ಥಾನ ಇಲ್ಲದಿದ್ದರೂ ಕಡೆಪಕ್ಷ ಬೃಹತ್ ನೀರಾವರಿ ಖಾತೆಯನ್ನಾದರೂ ನೀಡಬೇಕೆಂದು ಮನವಿ ಮಾಡಿದ್ದಾರೆ. ಮಹೇಶ್ಕುಮಟಳ್ಳಿಯನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ. ಅವರಿಗೆ ದೆಹಲಿ ವಿಶೇಷ ಪ್ರತಿನಿಧಿಯನ್ನಾಗಿ ನೇಮಕ ಮಾಡಲಾಗುವುದು. ಸಂಪುಟ ಪುನಾರಚನೆಯಾದ ನಂತರ ಅ ಅವರಿಗೆ ಸ್ಥಾನ ಕಲ್ಪಿಸುವುದಾಗಿ ಬಿಎಸ್ವೈ ಭರವಸೆ ಕೊಟ್ಟಿದ್ದಾರೆ.
ಪಟ್ಟು ಸಡಿಲಿಸದ ರಮೇಶ್ ಜಾರಕಿಹೊಳಿ ಮಹೇಶ್ಕುಮಟಳ್ಳಿ, ಶ್ರೀಮಂತ ಪಾಟೀಲ್ಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು, ನೀವು ಉಪಚುನಾವಣೆಯಲ್ಲಿ ಇದೇ ಮಾತನ್ನು ಹೇಳಿದ್ದೀರಿ, ಈಗ ಕೊಟ್ಟ ಮಾತಿನಿಂದ ಹಿಂದೆ ಸರಿದರೆ ಅನ್ಯಾಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಕುಮಟಳ್ಳಿಯನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಗೊಂದಲ ಇನ್ನು ಮುಂದುವರೆದಿದೆ.
ಲಾಬಿ: ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಆಕಾಂಕ್ಷಿಗಳ ದಂಡು ಇಂದು ಯಡಿಯೂರಪ್ಪನವರ ನಿವಾಸಕ್ಕೆ ದಾಂಗುಡಿ ಇಟ್ಟಿತ್ತು. ಸಚಿವರಾಗುವುದು ಖಾತ್ರಿಯಾಗುತ್ತಿದ್ದಂತೆ ಶಾಸಕರಾದ ಭೈರತಿ ಬಸವರಾಜ್, ನಾರಾಯಣಗೌಡ ಮತ್ತಿತರರು ಸಿಎಂ ಅವರ ನಿವಾಸ ದವಳಗಿರಿಗೆ ಆಗಮಿಸಿ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದರು.
ನಮಗೆ ಯಾವುದೇ ಖಾತೆ ಕೊಟ್ಟರೂ ನಿರ್ವಹಣೆ ಮಾಡುತ್ತೇವೆ. ಇಂತಹುದ್ದೇ ಖಾತೆ ಕೊಡಿ ಎಂದು ಮುಖ್ಯಮಂತ್ರಿಗೆ ಬೇಡಿಕೆ ಇಟ್ಟಿಲ್ಲ ಎಂದು ನಾರಾಯಣಗೌಡ ಮತ್ತು ಭೈರತಿ ಬಸವರಾಜ್ ಸ್ಪಷ್ಟಪಡಿಸಿದರು.
ಇದರ ಬೆನ್ನಲ್ಲೇ ಮಾಜಿ ಸಚಿವ ಎಚ್.ವಿಶ್ವನಾಥ್ ಕೂಡ ಯಡಿಯೂರಪ್ಪನವರ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇನ್ನು ಸಂಪುಟಕ್ಕೆ ಸೇರ್ಪಡೆಯಾಗಲೇಬೇಕೆಂದು ತುದಿಗಾಲಲ್ಲಿ ನಿಂತಿರುವ ಹಾವೇರಿಯ ನೆಹರು ಓಲೆಕಾರ್, ಮೈಸೂರಿನ ಎಸ್.ಎ.ರಾಮದಾಸ್, ತಿಪ್ಪಾರೆಡ್ಡಿ ಸೇರಿದಂತೆ ಅನೇಕರು ಮುಖ್ಯಮಂತ್ರಿಯವರ ಮನೆ ಎಡತಾಕಿದರು.
ಈ ಬಾರಿಯಾದರೂ ನಮಗೆ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಆಕಾಂಕ್ಷಿಗಳು ಸಿಎಂ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಗುರುವಾರದವರೆಗೆ ಕಾದು ನೋಡಬೇಕು.