ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ ಮಳೆ ಬಿದ್ದಿದೆ. ಈ ಅವಧಿಯ ವಾಡಿಕೆ ಮಳೆ 236 ಮಿ.ಮೀ. ಅಂದರೆ; ವಾಡಿಕೆಗಿಂತ ಶೇ 21ರಷ್ಟು ಹೆಚ್ಚು ಮಳೆ ಸುರಿದಿದೆ. ಆದರೆ, ಈ ಮಳೆ ಇಡೀ ಜಿಲ್ಲೆಯಲ್ಲಿ ಏತಕಾನವಾಗಿಲ್ಲ.
ಅರ್ಧ ಜಿಲ್ಲೆಯ ರೈತರು ಇನ್ನೂ ಮಳೆಗೆ ಕಾಯುವ ಸ್ಥಿತಿ ಇದೆ.
ಸವದತ್ತಿ, ಹುಕ್ಕೇರಿ, ಬೆಳಗಾವಿ, ಖಾನಾಪುರ, ಚನ್ನಮ್ಮನ ಕಿತ್ತೂರು ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಅತಿ ಕಡಿಮೆ ಮಳೆಯಾಗಿದೆ. ಉಳಿದ ತಾಲ್ಲೂಕುಗಳು ಒಣಭೂಮಿ ಹೊಂದಿದ್ದರಿಂದ ಅಲ್ಲಿ ಕಡಿಮೆ ಮಳೆ ನಿರೀಕ್ಷೆ ಇತ್ತು. ಆದರೂ ವಾಡಿಕೆ ಮಳೆಗಿಂತ ಹೆಚ್ಚು ಬಿದ್ದಿದೆ. ಕಪ್ಪು ಮಣ್ಣು ಹಾಗೂ ಒಣಭೂಮಿ ಹೊಂದಿರುವ ಜಿಲ್ಲೆಯಲ್ಲಿ ಕೃಷಿ ಭೂಮಿಯ ಮಣ್ಣು ಸಾಕಷ್ಟು ಹಸಿ ಹಿಡಿದಿಲ್ಲ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಜಿಲ್ಲೆಯ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳಿಗೆ ಜೀವಕಳೆ ಬಂದಿದೆ. ಸದ್ಯಕ್ಕಿದು ಕುಡಿಯುವ ನೀರಿನ ಬವಣೆ ನೀಗಿಸಿದೆ.
ಸದ್ಯ ಬಿದ್ದ ಮಳೆಯು ಬೀಜಗಳು ಮೊಳಕೆಯೊಡೆಯಲು ಸಾಕಾಗುತ್ತದೆ. ಆದರೆ, ನೆಲ ಹೆಚ್ಚು ಹಸಿ ಹಿಡಿದರೆ ಮಾತ್ರ ಉತ್ತಮ ಇಳುವರಿ ನಿರೀಕ್ಷೆ ಮಾಡಲು ಸಾಧ್ಯ. ಹೀಗಾಗಿ ಗ್ರಾಮೀಣ ಪ್ರದೇಶದ ಜನ ಇನ್ನೂ ಆಕಾಶಕ್ಕೆ ಮುಖಮಾಡಿ ಆಸೆಯಿಂದ ಕುಳಿತಿದ್ದಾರೆ.